ಸ್ವಾತಂತ್ರ್ಯೋತ್ಸವಕ್ಕೆ ಮುನ್ನ…

Posted by ಅರುಂಧತಿ | Posted in | Posted on 1:11 AM


ಇನ್ನೊಂದು ವಾರ ಅನ್ನುವಷ್ಟರಲ್ಲಿ ನಮ್ಮ ಸ್ವಾತಂತ್ರ್ಯೋತ್ಸವ ಬರಲಿದೆ. ಅದಕ್ಕೆ ಮುನ್ನ ಹೀಗೊಂದು ಅವಲೋಕನ ಮಾಡಿಕೊಳ್ಳೋಣವೆನಿಸಿ ಬರೆಯುತ್ತಿದ್ದೇನೆ.

ಭಾರತ ಸ್ವಾತಂತ್ರ್ಯ ಹೋರಾಟ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಹುದೊಡ್ಡ ಪ್ರಕ್ರಿಯೆ. ಅದೇನೂ ಧಿಡೀರನೆ ಬಂದು ಕದ ತಟ್ಟಿದ್ದಲ್ಲ.
“ಆಂಗ್ಲರು ನಮ್ಮನ್ನು ಲೂಟಿ ಮಾಡಬಹುದಾಗಿದ್ದಷ್ಟನ್ನೂ ಮಾಡಿ ಮುಗಿಸಿ, ಇನ್ನು ಇಲ್ಲೇನೂ ದಕ್ಕುವುದಿಲ್ಲ ಎಂದು ಅರಿವಾದ ನಂತರವಷ್ಟೆ ಕಾಲು ಕಿತ್ತಿದ್ದು” ಎಂದು ಯುವಕನೊಬ್ಬ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹಾಗಾದರೆ…?
ಹಾಗಾದರೆ ನಮ್ಮವರು ಅಷ್ಟೆಲ್ಲ ಹೋರಾಡುವ ಅಗತ್ಯವೇ ಇರಲಿಲ್ಲವಾ? ಹೇಗಿದ್ದರೂ ಮೆದ್ದು ಮುಗಿದ ನಂತರ ಅವರೇ ಜಾಗ ಖಾಲಿ ಮಾಡುತ್ತಿದ್ದರಲ್ಲ!?
- ಹೀಗಂತ ಯೋಚಿಸುವುದೇ ಬೇಡವೆನಿಸಿತು. ಏಕೆಂದರೆ “ಭಾರತದಲ್ಲಿ ಇನ್ನು ಏನೂ ಉಳಿದಿಲ್ಲ” ಅನ್ನೋದು ಆ ಯುವಕನ ತಪ್ಪು ತಿಳುವಳಿಕೆ ಮಾತ್ರ.
ನಿಜ… ನಮ್ಮಲ್ಲಿ ಅಮೆರಿಕೆಯಲ್ಲಿರುವಂಥ ರೋಡುಗಳಿಲ್ಲ. ಇಂಗ್ಲೆಂಡಿನಲ್ಲಿರುವಂಥ ಮೂಲಭೂತ ಸೌಕರ್ಯಗಳಿಲ್ಲ. ದೊಡ್ಡ ದೊಡ್ಡ ಕಟ್ಟಡಗಳಿಲ್ಲ.
ಆದರೆ…
ಆದರೆ,
ನಮ್ಮಲ್ಲಿ ಸಂತೃಪ್ತಿ ಇದೆ. ನಮ್ಮಲ್ಲಿ ಆಧ್ಯಾತ್ಮಿಕತೆ ಇದೆ. ಯೋಗವಿದೆ. ಬುದ್ಧಿವಂತಿಕೆಯಿದೆ. ಕೌಶಲ್ಯವಿದೆ. ಕುಟುಂಬಗಳಿವೆ! ಬಾಂಧವ್ಯಗಳು ಗಟ್ಟಿಯಾಗಿವೆ!! ( ಈಗೀಗ ಹೊಂದಾಣಿಕೆ ಕಡಿಮೆಯಾಗಿ ಛಿದ್ರವಾಗ್ತಿದೇವೆಂದರೂ ಅದು ಮೇರೆ ಮೀರಿ ಹೋಗಿಲ್ಲ ಅನ್ನುವುದು ವಾಸ್ತವ ಸತ್ಯ) ಕಳ್ಳ- ಕಾಕರು, ಭ್ರಷ್ಟರು, ಬಡ- ಭಿಕ್ಷುಕರು ಬಿಡಿ, ಎಲ್ಲೆಡೆಯೂ ಇರುವರು. ಅಮೆರಿಕ- ಯುರೋಪುಗಳಲ್ಲೂ! (ಅವೇನೂ ದೇವಲೋಕಗಳಲ್ಲ ಅನ್ನೋದು ನೆನಪಿರಲಿ)
ಅದೆಲ್ಲ ಯಾಕೆ? ನಮಗೆ ಇನ್ಯಾರೂ ಹೇಳಿಕೊಳ್ಳಲಾಗದಷ್ಟು ಭವ್ಯವಾದ ಇತಿಹಾಸವಿದೆ! ಆದರೆ ನಾವದನ್ನು ಹಳೆಯ ಪ್ರತಿಷ್ಠೆಗಳ ಗೋರಿ ಎಂದು ಬಗೆಯದೆ ಸದೃಢ ರಾಷ್ಟ್ರ ನಿರ್ಮಾಣದ ಬುನಾದಿ ಎಂದರಿತು ಸಾಗಿದರೆ ಯಶಸ್ಸು ಸದಾ ನಮ್ಮ ಜತೆಗಿರುತ್ತದೆ.

ಹೌದು. ಕಳೆದ ಸಾರ್ತಿಯೋ, ಅದರ ಹಿಂದಿನ ಸರ್ತಿಯೋ ಮನ ಮೋಹನ ಸಿಂಗರು ಹೇಳಿದ್ದರು. ಬ್ರಿಟಿಷರು ಬಾರದಿದ್ದರೆ ನಾವು ಇಷ್ಟೆಲ್ಲ ಮುಂದುವರೆಯುತ್ತಿರಲಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಇದು, “ಈಗ್ಯಾಕೆ ಮತ್ತೆ ಸಿಂಗ್ ಹೆಳಿದ ವಿಷಯ ಕೆದಕಬೇಕು?” ಅಂದು ಸುಮ್ಮನಾಗುವ ಸಂಗತಿಯಲ್ಲ… ಏಕೆಂದರೆ ರಾಷ್ಟ್ರದ ಜಾವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನ ಇಂತಹ ಅಪ್ರಬುದ್ಧ ಹೇಳಿಕೆ ಅದೆಷ್ಟು ಜನರನ್ನು ಅದೇ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ ಅನ್ನುವ ಅರಿವು ಇದೆಯೆ?
ವಾಸ್ತವವಾಗಿ ನಮಗೂ ಕೂಡ ಬಾಲ್ಯದಲ್ಲಿ (ಕಾನ್ವೆಂಟಿನಲ್ಲಿ) ಹೀಗೇ ಹೇಳಿಕೊಡಲಾಗಿತ್ತು. ನಾನು, ನನ್ನಂಥಲಕ್ಷ ಲಕ್ಷ ವಿದ್ಯಾರ್ಥಿನಿಯರು ಅದನ್ನೆ ನೆಚ್ಚಿಕೊಂಡಿದ್ದೆವು. ಆದರೆ, ಯಾವಾಗ ಸಂಸ್ಕೃತದ ಪರಿಚಯವಾಯ್ತೋ, ಜಾನಪದದ ಅಧ್ಯಯನ ಶುರುವಾಯ್ತೋ, ಆಯುರ್ವೇದ- ಮನೆ ಮದ್ದುಗಳ, ಹಳ್ಳಿ ಜನರ ತಾಂತ್ರಿಕ ಕೌಶಲಗಳ, ಹಳೆ ಹಳೆಯ ಗ್ರಂಥಗಳ ಪರಿಚಯವಾಯ್ತೋ ನನ್ನ ಆವರೆಗಿನ ತಿಳುವಳಿಕೆ ಬಗ್ಗೆ ಅತೀವ ನಾಚಿಕೆ ಶುರುವಾಯ್ತು.

ಮೆಹರೂಲಿ ಕಂಬ, ಕುತುಬ್ ಮಿನಾರ್, ಭವ್ಯ ದೇವಾಲಯಗಳು, ಏಕ ಶಿಲಾ ವಿಗ್ರಹಗಳು, ಕೋಟೆ ಕೊತ್ತಲಗಳು… ಇವೆಲ್ಲ ಆಂಗ್ಲರಿಗಿಂತ ಮೊದಲೇ ನಿರ್ಮಿಸಲ್ಪಟ್ಟಿದ್ದಲ್ಲವೆ?
ನಾಗಾರ್ಜುನ (ರಾಸಾಯನ ಶಾಸ್ತ್ರ), ಆರ್ಯಭಟ (ಖಗೋಳ), ಭಾಸ್ಕರ (ಗಣಿತ), ಕಲ್ಹಣ (ಇತಿಹಸಕಾರ), ಚರಕ, ಸುಶ್ರುತ (ಆಯುರ್ವೇದ) ಇವರೆಲ್ಲ ಈ ಕ್ಷಣಕ್ಕೆ ನೆನಪಾಗುವ ಹೆಸರುಗಳಾದರೆ, ಜ್ಯಮಿತಿ ತತ್ತ್ವಗಳಿಗನುಗುಣವಾಗಿ ಯಜ್ಞವೇದಿಗಳನ್ನು ರಚಿಸುತ್ತಿದ್ದ ಋಷಿ ಮುನಿಗಳು, ವಾಸ್ತು ಕಲೆಯಲ್ಲಿ ನಿಪುಣರಾಗಿದ್ದ ಸಾಮಾನ್ಯ ಶಿಲ್ಪಿಗಳು, ಬಿಡುವಿನ ವೇಳೆಯಲ್ಲಿ ಬ್ರಹ್ಮ ತತ್ತ್ವ ಹರಟುತ್ತಿದ್ದ ಬ್ರಹ್ಮವಾದಿನಿಯರು…ಇವರೆಲ್ಲ ಯವ ಆಂಗ್ಲ ಶಿಕ್ಷಣವನ್ನೂ ಪಡೆದವರಾಗಿರಲಿಲ್ಲ!

ಆದರೂ… ನಮ್ಮ ಪೀಳಿಗೆ ಹೇಳುತ್ತದೆ, ಇಂಗ್ಲೀಷಿಲ್ಲದಿದ್ದರೆ ನಾವು ಮುಂದುವರೆಯೋದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳೋದು ಸಾಧ್ಯವಾಗ್ತಲೇ ಇರಲಿಲ್ಲ!
ಹ್ಹ! ಜಪಾನ್, ಚೀನಾ, ಅರಬ್ ರಾಷ್ಟ್ರಗಳು, ಇಸ್ರೇಲ್… ಮತ್ತೂ ಉದಾಹರಣೆ ಬೇಕೆ, ಇಂಗ್ಲೀಶಿಗೆ ಮಣೆ ಹಾಕದೆ ಪ್ರಗತಿದೆಸೆಯಲ್ಲಿ ದಾಪುಗಾಲಿಕ್ಕುತ್ತಿರುವುದಕ್ಕೆ? ಹಾಗೆಂದು ಇಲ್ಲಿ ಪ್ರ ಭಾಷೆಗಳ ಕಲಿಕೆಗೆ ಯಾರ ವಿರೋಧವೂ ಇಲ್ಲ. ಆದರೆ ಆ ನೆವದಲ್ಲಿ ನಮ್ಮದನ್ನು ಕೀಳಾಗಿ ಕಂಡು ಹಳಿಯೋದಿದೆಯಲ್ಲ… ಅದು ಶುದ್ಧ ಮೂರ್ಖತನದ ಮಾತು.

ನಮ್ಮ ಮೊದಲ ಪ್ರಧಾನಿ ನೆಹರೂಗಂತೂ ಭಾರತದ ರಾಷ್ಟ್ರ ಭಾಷೆ ಇಂಗ್ಲೀಶ್ ಆಗಬೇಕು ಅನ್ನುವ ಕನಸಿತ್ತು. ನಮ್ಮ ಸುಕೃತ! ಅದು ಕನಸಾಗಿಯೆ ಉಳಿದುಬಿಡ್ತು!!
ಇಷ್ಟಕ್ಕೂ, ನಮ್ಮ ದೇಶದಿಂದ ‘ಸೊನ್ನೆ’ಯನ್ನು ಜಗತ್ತು ಎರವಲು ಪಡೆಯಿತಲ್ಲ, ಆಗ ನಾವದನ್ನ ಇಂಗ್ಲೀಶಲ್ಲಿ ಬರೆದಿಟ್ಟಿದ್ದೆವಾ? ಗ್ರೀಕಿನೊಂದಿಗೆ ವ್ಯಾಪಾರ ಸಂಬಂಧವಿರಿಸಿಕೊಂಡಿದ್ದೆವಲ್ಲ, ಆಗ ಇಂಗ್ಲೀಶ್ ಕಲಿತಿದ್ದೆವಾ? ಯಾವ ನಮ್ಮ ಮಸ್ಲಿನ್ ಬಟ್ಟೆಗೋಸ್ಕರ, ಮಸಾಲಾ ಪದಾರ್ಥಗಳಿಗೋಸ್ಕರ, ಚಿನ್ನ-ಮುತ್ತು-ವಜ್ರಗಳಿಗೋಸ್ಕರ ಅನ್ಯರು ಮತ್ತೆ ಮತ್ತೆ ದುರಾಕ್ರಮಣ ಮಾಡಿ ಕೊಳ್ಳೆ ಹೊಡೆದು ಹೋದರಲ್ಲ, ಆಗ ಅವರಿಗೆಲ್ಲ ನಮ್ಮಲ್ಲಿ ಸಂಪತ್ತಿರುವ ಮಾಹಿತಿ ಇಂಗ್ಲೀಶಿನ ಮೂಲಕವೇ ತಿಳಿದುದಾಗಿತ್ತಾ!?
ಇಷ್ಟಕ್ಕೂ ಈಗ ನಾವು ಇಂಗ್ಲಿಶ್ ಕಲಿತು ಕಡಿಯುತ್ತಿರೋದೇನು? ಪಾಶ್ಚಾತ್ಯರ ಗುಲಾಮಗಿರಿ! ಕಾಲ್ ಸೆಂಟರು, ಬಿಪಿಓಗಳಲ್ಲಿ ಪರಿಚಾರಿಕೆ!! ಪರಿಣಾಮ? ಕಷ್ಟ ಪಡದೆ ಉದ್ಯೋಗ, ಕೈ ತುಂಬಿ ಚೆಲ್ಲುವಷ್ಟು ಹಣ, ಮೌಲ್ಯಗಳ ಕುಸಿತ, ಪ್ರಗತಿಯಲ್ಲಿ ಇಳಿಕೆ!
ಇತ್ತೀಚೆಗೆ ಟೆಕಿಗಳು, ಕಾಲ್ಸೆಂಟರಿನ ಯುವಕರು ಒಂದಷ್ಟು ಸಮಾಜ ಮುಖಿ ಕೆಲಸಗಳಲ್ಲಿ ಆಸಕ್ತಿ ತೋರಿಸ್ತಿರೋದು ಒಳ್ಳೆಯ ಬೆಳವಣಿಗೆ. ಆದರೆ ಆ ಉದ್ಯೋಗಗಳಿಂದಾಗ್ತಿರೋ ಸೈಡ್ ಎಫೆಕ್ಟ್ ಗಳಿಗೆ ಅಷ್ಟು ಮಾತ್ರ ಸಾಲದು. ಆ ಬಗೆಯ ಉದ್ಯೋಗಿಗಳಲ್ಲಿ ರಾಷ್ಟ್ರ ಪ್ರಜ್ಞೆ ವ್ಯಾಪಕವಾಗಿ ಬೆಳೆಯಬೇಕು.

ಸದ್ಯಕ್ಕೆ ಈ ಹರಟೆ ನಿಲ್ಲಿಸುವೆ. ಅದಕ್ಕೆ ಮುನ್ನ, ಮೆಕಾಲೆ ಎನ್ನುವ ಆಂಗ್ಲನೊಬ್ಬ ನಮ್ಮ ರಾಷ್ಟ್ರವನ್ನು ನೋಡಿ ದಂಗುಬಡಿದು ಬಡಬಡಿಸಿದ್ದನ್ನು ಇಲ್ಲಿ ನೀಡುತ್ತಿರುವೆ.



“ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದೆ. ಆದರೆ ಎಲ್ಲೂ ನನಗೆ ಒಬ್ಬ ಭಿಕ್ಷುಕನಾಗಲೀ ಕಳ್ಳನಾಗಲೀ ಕಾಣಸಿಗಲಿಲ್ಲ. ಈ ದೇಶದಲ್ಲಿ ನಾನು ಎಷ್ಟೊಂದು ಸಂಪತ್ತನ್ನು, ನೈತಿಕ ಮೌಲ್ಯಗಳನ್ನು, ಜನರ ಔದಾರ್ಯವನ್ನು, ಕೌಶಲ್ಯವನ್ನು ಕಂಡೆನೆಂದರೆ, ಈ ದೇಶದ ಬೆನ್ನೆಲುಬಾಗಿರುವ ಆಧ್ಯಾತ್ಮ ಮತ್ತು ಸಂಸ್ಕೃತಿಗಳನ್ನು ಮುರಿಯದೆ ನಾವು ಇದನ್ನು ವಶಪಡಿಸಿಕೊಳ್ಳೋದು ಸಾಧ್ಯವೇ ಇಲ್ಲ ಎಂದೆನಿಸುತ್ತದೆ. ಆದ್ದರಿಂದ ನನ್ನ ಸೂಚನೆಯೇನೆಂದರೆ, ನಾವು ಭಾರತದ ಶಿಕ್ಷಣ ಪದ್ಧತಿ ಮತ್ತು ಸಂಸ್ಕೃತಿಯ ಜಾಗದಲ್ಲಿ ನಮ್ಮದನ್ನು ತಂದು, ಭಾರತೀಯರೆಲ್ಲರೂ ಪರದೇಶದ ಮತ್ತು ಇಂಗ್ಲೀಶಿನ ಎಲ್ಲವೂ ನಮ್ಮದಕ್ಕಿಂತ ಉತ್ಕೃಷ್ಟ ಎಂದು ಯೋಚಿಸುವಂತಾಗಬೇಕು. ಆಗ ಖಚಿತವಾಗಿಯೂ ಅವರು ತಮ್ಮ ಸ್ವಾಭಿಮಾನ ಮತ್ತು ಸಂಸ್ಕೃತಿಗಳನ್ನು ಕಳೆದುಕೊಂಡು, ನಾವು ಬಯಸುವಂತೆ ನಿಜವಾಗಿಯೂ ನಮ್ಮ ಹಿಡಿತಕ್ಕೆ ಸಿಗುತ್ತಾರೆ”

ಹಾಗಾದರೆ… ಮೆಕಾಲೆ ಬಿತ್ತಿದ ವಿಷ ಬೀಜ ನಿರಂತರವಾಗಿ ವಿಷ ಫಲಗಳನ್ನು ನೀಡುತ್ತಿರುವಂತೆ ನಾವು ಜತನದಿಂದ ಕಾಪಾಡಿಕೊಂದು ಬರುತ್ತಿದ್ದೇವಾ?

Comments Posted (0)