ಅಣು ಒಪ್ಪಂದದ ಆಜೂ ಬಾಜು…

Posted by ಅರುಂಧತಿ | Posted in | Posted on 1:17 AM

ಅಣು ಒಪ್ಪಂದದ ಕುರಿತಾದ ‘ಅಧಿವೇಶನ’ ಕೊನೆಗೂ ಪ್ರಹಸನವಾಗಿಯೇಬಿಡ್ತು. ಎರಡೂ ದಿನ ಅಣು ಒಪ್ಪಂದದ ಕುರಿತು ಘನವಾದ ಚರ್ಚೆಗಳಾಗುತ್ತದೆಂದು ಭಾವಿಸಿದ್ದವರಿಗೆ ತೀವ್ರ ನಿರಾಶೆ. ಟೀವಿ ಮುಂದೆ ಕುಳಿತು ಕಲಾಪ ವೀಕ್ಷಿಸಿದ್ದವರನ್ನು ಬಿಡಿ, ಸರ್ಕಾರದ ಅನುಮತಿ ಪಡೆದು ಜೈಲಿನಿಂದ ನೇರವಾಗಿ ಬಂದು ಅಧಿವೇಶನದಲ್ಲಿ ಕುಳಿತಿದ್ದ ಎಸ್ ಪಿ ಯ ಸಂಸದ ಕೂಡ ತನಗೆ ‘ಒಪ್ಪಂದ ಏನೆಂದೇ ಅರ್ಥವಾಗಲಿಲ್ಲ’ ಎಂದಿದ್ದು ಹಾಸ್ಯಾಸ್ಪದವೇನಲ್ಲ.



ಜವಾಬ್ದಾರಿಯುತವಾಗಿ ಮಾತಾಡಬೇಕಿದ್ದ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿಗಳು ಯುಪಿಎ ಯ ಸಾಧನೆ ಹೇಳಲು ಸಮಯ ವ್ಯಯ ಮಾಡಿದರೆ, ಪ್ರತಿಪಕ್ಷದ ನಾಯಕರು ಅರೋಪಗಳಿಗೇ ಹೆಚ್ಚಿನ ಸಮಯ ಕೊಟ್ಟು ಒಪ್ಪಂದದ ತಿರುಳೇ ಮರೆಯುವಂತೆ ನೋಡಿಕೊಂಡರು. ಇಷ್ಟಕ್ಕೂ ಒಪ್ಪಂದದ ಲಾಭವೇನು? ರಾಹುಲ್ ಗಾಂಧಿ ಮನಕಲಕುವಂತೆ ಮಾತನಾಡಿ ‘ಬಡವರಿಗೆ ಬೆಳಕಿಲ್ಲ, ಅವರಿಗೆ ಕರೆಂಟು ಕೊಡಲು ಈ ಒಪ್ಪಂದ’ ಎಂದರು. ಇದು ಕಾಂಗ್ರೆಸ್ಸಿನ ಸದಾ ಕಾಲದ ಚಾಳಿ. ಘನವಾದ ವಿಷಯ ಬಂದೊಡನೆ ಬಡವರನ್ನ ತಂದು ಎದುರಿಟ್ಟುಕೊಳ್ಳೋದು. ನಾಲ್ಕು ದಶಕದ ಹಿಂದೆ ಇಂದಿರಾ ‘ಗರೀಬೀ ಹಠಾವೋ’ ಎಂಬ ಘೋಷಣೆ ಮೊಳಗಿಸಿದ್ದು ಯಾರಿಗೆ ನೆನಪಿಲ್ಲ ಹೇಳಿ? ಪ್ರಮುಖ ಚರ್ಚೆಯನ್ನು ಭಾವುಕತೆಯತ್ತ ತಿರುಗಿಸಿ ಮಾಧ್ಯಮಗಳನ್ನು ಸೆಳೆಯುವಲ್ಲಿ ರಾಹುಲ್ ಯಶಸ್ವಿಯಾಗಿಬಿಟ್ಟರು. ಆದರೆ, ಒಪ್ಪಂದ ಜಾರಿಯಾದರೆ ಬಡವರ ಮನೆಗೆ ಕರೆಂಟು ಗ್ಯಾರೆಂಟೀನಾ? ಈ ಪ್ರಶ್ನೆಗೆ ಮಾತ್ರ ಉತ್ತರ ಸಿಗದೇ ಹೋಯ್ತು.

ಒಪ್ಪಂದದ ಹಿಂದಿನ ಸಂಚೇನು?

ಸದ್ಯದ ಮಟ್ಟಿಗೆ ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ವಿದ್ಯುಚ್ಛಕ್ತಿಯಲ್ಲಿ ಅಣು ವಿದ್ಯುತ್ತಿನ ಪ್ರಮಾಣ ಎಷ್ಟು ಗೊತ್ತೆ? ಶೇಕಡಾ ಮೂರರಷ್ಟು ಮಾತ್ರ. ಇದಕ್ಕೆ ಪ್ರತಿಯಾಗಿ ಕಲ್ಲಿದ್ದಲು ಶೇ.೬೬ರಷ್ಟು, ಜಲ ಶಕ್ತಿ ಶೇ.೨೬ರಷ್ಟು, ಸೌರ ಶಕ್ತಿ ಶೇ.೫ರಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಈ ದೇಶದ ಇಪ್ಪತ್ತೆರಡು ಅಣು ರಿಯಾಕ್ಟರುಗಳು ಸೇರಿ ಶೇಕಡಾ ಮೂರರಷ್ಟು ಮಾತ್ರ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿದೆ ಎಂದಮೇಲೆ, ಅದನ್ನು ದ್ವಿಗುಣಗೊಳಿಸಲು ಮಾಡಬೇಕಾದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿ!
ಒಂದು ಅಂದಾಜಿನ ಪ್ರಕಾರ ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿ, ಇಂದಿನ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಅಣು ವಿದ್ಯುತ್ ಪಡೆಯಬಹುದು. ಇಷ್ಟು ಮಾತ್ರದ ವಿದ್ಯುತ್ ಲಕ್ಷಾಂತರ ಹಳ್ಳಿಗಳಿಗೆ ಬೆಳಕು ಕೊಡುತ್ತದೆ ಎಂದು ವಾದಿಸುತ್ತಿರುವವರಿಗೆ ಏನು ಹೇಳಬೇಕು!?

ಈ ನಮ್ಮ ಸರ್ಕಾರಗಳು ಕಳೆದ ಕೆಲವಾರು ದಶಕಗಳಿಂದ ಜಲ ಶಕ್ತಿಯನ್ನು ಅದೆಷ್ಟು ನಿರ್ಲಕ್ಷಿಸುತ್ತಿವೆಯೆಂದರೆ, ಭೂಗರ್ಭದಲ್ಲಿ ಜಲಸ್ರೋತವನ್ನು ಹೆಚ್ಚಿಸುವ, ಸಮುದ್ರದ ಅಲೆಗಳ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಗೋಜಿಗೇ ಹೋಗುತ್ತಿಲ್ಲ. ಸೌರ ಶಕ್ತಿಯ ವ್ಯಾಪಕ ಬಳಕೆಯ ಕುರಿತಾದ ಸಂಶೋಧನೆಗಳು, ಚಟುವಟಿಕೆಗಳು ನಡೆಯುತ್ತಿರುವುದು ತೀರಾ ಕಡಿಮೆ. ಇಂತಹ ವಿಫುಲ ಅವಕಾಶಗಳನ್ನು ಕೈಚೆಲ್ಲಿ ವಿದ್ಯುತ್ ನ ನೆಪ ಹೇಳಿ ಒಪ್ಪಂದಕ್ಕೆ ಮುಂದಾಗುತ್ತಿರುವುದು ಯಾಕೆ? ಈ ಪ್ರಶ್ನೆಗೆ ಉತ್ತರವಿಲ್ಲ. ಈ ನಡುವೆಯೇ ಇನ್ನೊಂದು ಅಂಶ ನೆನಪಿಡಬೇಕು. ಅಮೆರಿಕಾದ ಸಹಕಾರ ಮತ್ತು ಇಂಧನ ಪಡೆದು ವಿದ್ಯುತ್ ಉತ್ಪಾದಿಸುವ ಈ ಯೋಜನೆಯ ಕನಸು ನನಸಾಗೋದು ೨೦೨೦ರಲ್ಲಿ! ಅವತ್ತಿನ ಮಟ್ಟಿಗೆ ಈಗಿನ ಅವಶ್ಯಕತೆಗಿಂತ ನಾಲ್ಕು ಪಟ್ಟಾದರೂ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ. ಆಗ ಈ ಯೋಜನೆ ಕೊಡುವ ವಿದ್ಯುತ್ ನ ಪ್ರಮಾಣ- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ, ಅಷ್ಟೇ.

ಇಷ್ಟೆಲ್ಲಾ ಅಣುವಿದ್ಯುತ್ತಿನ ಬಗ್ಗೆ ಮಾತಾಡುವ ಈ ದೇಶದ ನಾಯಕರುಗಳಿಗೆ ಗೊತ್ತೇ ಇಲ್ಲದ (ಅಥವಾ ಹಾಗೆ ನಟಿಸುವ) ಒಂದು ಅಂಶವಿದೆ. ಅದು, “ಕಳೆದ ಮುವ್ವತ್ತು ವರ್ಷಗಳಿಂದ ಅಮೆರಿಕಾ ಒಂದೇ ಒಂದು ಅಣುಶಕ್ತಿ ಘಟಕವನ್ನು ಹೊಸದಾಗಿ ಶುರು ಮಾಡಿಲ್ಲ” ಅನ್ನೋದು! ಅಷ್ಟೇ ಅಲ್ಲ, ಒಂದು ಅಣು ಘಟಕವನ್ನು ಮುಚ್ಚಲು ಹೋಗಿ ಅದು ಲಕ್ಷಾಂತರ ಡಾಲರು ವ್ಯಯಿಸಿ ಕೈಸುಟ್ಟುಕೊಂಡಿದೆ ಕೂಡಾ!!
ತನ್ನ ಬೇಡಿಕೆಯ ಶೇ.೯೦ರಷ್ಟು ವಿದ್ಯುತ್ ಅಣು ರಿಯಾಕ್ಟರಿನಿಂದಲೇ ಬರುತ್ತದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಫ್ರಾನ್ಸ್, ಕಳೆದ ಕೆಲವಾರು ವರ್ಷಗಳಿಂದ ಈ ರಿಯಾಕ್ಟರುಗಳಿಂದ ಕೈತೊಳೆದುಕೊಳ್ಳುವ ಉಪಾಯ ಹುಡುಕುತ್ತಿದೆ. ವಿದ್ಯುತ್ ಬಳಕೆ ಕಡಿಮೆ ಮಾಡಿ ಎಂದು ಜನರಿಗೆ ಬುದ್ಧಿ ಹೇಳುತ್ತಿದೆ. ಇನ್ನೂ ಮುಂದುವರೆದು, ಈ ದೆಶಗಳೆಲ್ಲ ತಮ್ಮ ಹಳೆಯ ಹಪ್ಪಟ್ಟು ರಿಯಾಕ್ಟರುಗಳನ್ನು ನಮ್ಮ ದೇಶಕ್ಕೆ ಮಾರಲಿದ್ದಾರೆ, ತಾವು ಮಾತ್ರ ವಿದ್ಯುತ್ ಪಡೆಯಲು ಹೊಸ ಮಾರ್ಗದತ್ತ ಹೊರಳಲಿದ್ದಾರೆ.

ಈ ಒಪ್ಪಂದದಂತೆ ಅಮೆರಿಕಾ ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಕಾಂಟ್ರ್ಯಾಕ್ಟನ್ನು ಪಡೆಯುತ್ತಿಲ್ಲ, ಬದಲಿಗೆ ಉತ್ಪಾದನೆಗೆ ಬೇಕಾದ ತಂತ್ರಜ್ಞಾನವನ್ನೂ ಇಂಧನವನ್ನೂ ಪೂರೈಸುವ ಭರವಸೆ ನೀದುತ್ತಿದೆ. ಅಷ್ಟಕ್ಕೇ ಅದೆಷ್ಟು ನಿಯಮವಳಿಗಳೆಂದರೆ, ಆ ಮೂಲಕ ಭರತದ ಸಾರ್ವಭೌಮತೆಯನ್ನು ಕಸಿಯುವಷ್ಟು! ಸಾರ್ವಭೌಮತೆ ಕುರಿತಂತೆ ಆಮೇಲೆ ಚರ್ಚಿಸೋಣ. ಮೊದಲಿಗೆ ಅಣು ಇಂಧನದ ಬಗ್ಗೆ ಒಂದಷ್ಟು ಪ್ರಶ್ನೆಗೆ ಉತ್ತರ ಪಡೆಯೋಣ. ವಿಜ್ಞಾನಿಗಳು ನೀಡುವ ಅಂಕಿಅಂಶದ ಪ್ರಕಾರ ಮುಂದಿನ ನಲವತ್ತು ವರ್ಷಗಳಲ್ಲಿ ನಮಗೆ ಒಟ್ಟು ಅಣು ಇಂಧನ- ಯುರೇನಿಯಂ ೨೫ಸಾವಿರ ಮೆಗಾಟನ್ ನಷ್ಟು ಬೇಕಾಗುತ್ತದೆ. ನೀವು ನಂಬಲಾರಿರಿ. ನಮ್ಮ ಬಳಿ ಅದಾಗಲೇ ೭೮ ಸಾವಿರ ಮೆಗಾಟನ್ ನಷ್ಟು ಇಂಧನವಿದೆ. ನಮಗೆ ಸಾಲುವಷ್ಟು ಇಂಧನ ಉಳಿಸಿಕೊಂಡು ಅಮೆರಿಕಕ್ಕೂ ರಫ್ತು ಮಾಡಬಹುದಾದಷ್ಟಿದೆ! ಹೀಗಿರುವಾಗ ನಾವೇಕೆ ಅಮೆರಿಕೆಯೆದುರು ಕೈ ಚಾಚಬೇಕು?
ಹಾಗೊಮ್ಮೆ ನಮ್ಮಲ್ಲಿ ಯುರೇನಿಯಂ ಖಲಿಯಾದರೂ ಥೋರಿಯಮ್ ನಿಕ್ಷೇಪ ಸಾಕಷ್ಟು ಸಮೃದ್ಧವಾಗಿದೆ. ಇಂದು ಜಗತ್ತು ಯುರೇನಿಯಂಗಿಂತಲೂ ಥೋರಿಯಂ ಸಮರ್ಥ ಅಣು ಇಂಧನವೆಂದು ಪರಿಗಣಿಸಿ ಅದರತ್ತ ವಾಲುತ್ತಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಇತರೆಲ್ಲೆಡೆಗಿಂತ ಅತಿ ಹೆಚ್ಚಿನ ಥೋರಿಯಂ ನಿಕ್ಷೇಪವಿರುವುದು ಭಾರತದಲ್ಲಿಯೇ! ಇದರ ಬಳಕೆಯ ಹೊಸ ಹೊಸ ಅವಿಷ್ಕಾರಗಳಾದರೆ ನಮ್ಮ ಬಲ ಅಮೆರಿಕೆಯನ್ನೂ ಹಿಂದಿಕ್ಕುವಷ್ಟು ವೃದ್ಧಿಸುವುದರಲ್ಲಿ ಸಂಶಯವಿಲ್ಲ.

ಎಲ್ಲ ಸರಿ, ಅಮೆರಿಕಾ ನಮ್ಮೊಂದಿಗೆ ಅಣು ಒಪ್ಪಂದ ಮಾಡಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವುದು ಯಾಕೆ? ಈವರೆಗಿನ ಅದರ ಇತಿಹಾಸದಲ್ಲಿ ತನಗೆ ಅತಿ ಹೆಚ್ಚಿನ ಲಾಭವಿಲ್ಲದೆ ಅದು ಯಾವ ಕೆಲಸವನ್ನೂ ಮಾಡಿದ್ದೇ ಇಲ್ಲ. ಈ ಬಾರಿಯೂ ಅಷ್ಟೇ. ಅದು ಭಾರತದ ಎಲ್ಲ ರಿಯಾಕ್ಟರುಗಳ ಮೇಲೆ ತನ್ನ ನಿಗಾ ಇಡುವುದಕ್ಕೆ, ಅಣು ಬಾಂಬು ತಯಾರಿಸದಂತೆ ತಎಯುವುದಕ್ಕೆ ಸಾಧ್ಯವಾಗುವಂತೆಯೇ ಒಪ್ಪಂದ ರೂಪಿಸಿಕೊಂಡಿದೆ. ಅದರ ನಿಯಮಗಳಂತೆ ಬಾಂಬು ತಯಾರಿಕೆಗೆ ಅಗತ್ಯವಿರುವ ಪ್ಲುಟೋನಿಯಮ್ ಅನ್ನು ಭಾರತ ಹೊಂದುವಂತೆಯೇ ಇಲ್ಲ. ಅಂದಮೇಲೆ, ಭಾರತ ಇದುವರೆಗೆ ಕಾಪಾಡಿಕೊಂಡು ಬಂದ ಸಾರ್ವಭೌಮತೆ ಮಣ್ಣುಪಾಲಾದಂತೆಯೇ ಅಲ್ಲವೆ?

ಹಾ! ಇನ್ನೊಂದು ವಿಷಯವಿದೆ. ಭಾರತ ಇರಾನಿನೊಂದಿಗೆ ಕೊಳವೆ ಮಾರ್ಗದ ಮೂಲಕ ಇಂಧನ ಪೂರೈಕೆಯ ಒಪ್ಪಂದ ಮಾಡಿಕೊಂಡಿತ್ತಲ್ಲ? ಆಗಲೇ ಅಮೆರಿಕಾ ಈ ಅಣುಒಪ್ಪಂದಕ್ಕೆ ಹೊಂಚು ಹಾಕಿದ್ದು. ಹಾಗೇನಾದರೂ ಇರಾನಿನಿಂದ ಕೊಳವೆ ಬಂದು ಭಾರತಕ್ಕೆ ಅನಿಲ ಪೂರೈಕೆಯಾಗಿಬಿಟ್ಟರೆ ಏಷ್ಯಾದ ಮೇಲೆ ಅಮೆರಿಕೆಯ ಹಿಡಿತ ಕಳೆದುಹೋಗಿಬಿಡುತ್ತದೆ. ಅದಕ್ಕೇ, ಅದನ್ನು ತಪ್ಪಿಸಲು ಈಗಲೂ ಅದು ತಿಪ್ಪರಲಗ ಹಾಕುತ್ತಿದೆ. ತನ್ನ ಪ್ರಬಲ ಹಿಡಿತ ಉಳಿಸಿಕೊಳ್ಳಲಿಕ್ಕಾಗಿ ಭಾರತವನ್ನು ಬಲಿ ಕೊಡುತ್ತಿದೆ.

ನಾವೇನು ಮಾಡಬಹುದು?

ಭಾರತ- ಅಮೆರಿಕಾ ಎರಡೂ ರಾಷ್ಟ್ರಗಳಿಂದ ದೂರವುಳಿದು ಮೂರನೇ ಬುದ್ಧಿವಂತ ರಾಷ್ಟ್ರವಾಗಿ ನೋಡಿದಾಗ ಅಮೆರಿಕಕ್ಕಿಂತ ಭಾರತವೇ ಹೆಚ್ಚು ಸಮರ್ಥವಾಗಿ ತೋರುತ್ತದೆ. ರಾಜಕೀಯ ಇಚ್ಛಾಶಕ್ತಿಯಲ್ಲಿ ಮಾತ್ರ ಅಮೆರಿಕ ನಮಗಿಂತ ಮುಂದಿದೆ. ಆದರೆ, ಈ ಒಪ್ಪಂದ ಆಗಲೇ ಬಾರದು ಎಂದರೂ ಎಡವಟ್ಟಾದೀತು. ಒಪ್ಪಂದ ಆಗಬೇಕು, ಆದರೆ ಅದರ ನಿಯಮಾವಳಿಗಳು ನಮಗೆ ಅನುಕೂಲಕರವಾಗಿರಬೇಕು. ಈ ಒಪ್ಪಂದ ಮಾಡಿಕೊಂಡಿರುವ ಎಲ್ಲ ದೇಶಗಳ ೪೦೦ ರಿಯಾಕ್ಟರುಗಳಲ್ಲಿ ಕೆವಲ ಐದು ಮಾತ್ರ ಅಂತಾರಾಷ್ಟ್ರೀಯ ಸುಪರ್ದಿಗೆ ಒಳಪಟ್ಟಿದೆ. ಭಾರತದಲ್ಲಿ ಮಾತ್ರ ಹದಿನಾಲ್ಕೂ ರಿಯಾಕ್ಟರುಗಳೂ ಅದೇಕೆ ಅಮೆರಿಕದ ಕೈಗೆ ಕೀಲಿಯೊಪ್ಪಿಸಬೇಕು ಎಂಬುದು ಅರ್ಥವೇ ಆಗುತ್ತಿಲ್ಲ. ಈ ನಿಯಮ ಬದಲಾಗಬೇಕು. ಪರಮಾಣು ಶಕ್ತ ರಾಷ್ಟ್ರಗಳು ಒಪ್ಪಂದದಿಂದ ಯಾವಾಗ ಬೇಕಾದರೂ ಹಿಂದೆ ಬರುವ ನಿಯಮವಿದ್ದರೆ, ಭಾರತ ಮಾತ್ರ ಹಾಗೆ ಮಾಡುವಂತಿಲ್ಲ ಎನ್ನಲಾಗಿದೆ. ಅದೇಕೆ ಹಾಗೆ? ನಾವೂ ಫೋಖ್ರಾನ್ ನಲ್ಲಿ ಬಾಂಬ್ ಸ್ಫೋಟಿಸಲಿಲ್ಲವೇ? ನಾವೂ ಪರಮಣು ಶಕ್ತ ರಾಷ್ಟ್ರವೇ ತಾನೆ? ಅಂದಮೆಲೆ, ನಾವೇಕೆ ಒಪ್ಪಂದ ಬೇಡವಾದಾಗ ಹಿಂದೆ ಸರಿಯುವ ಹಾಗಿಲ್ಲ? ಈ ಪ್ರಶ್ನೆ ಗಟ್ಟಿಯಾಗಿ ಕೇಳಬೇಕಿದೆ. ‘ನಮ್ಮ ಆಂತರಿಕ ನೀತಿಗಳಿಗೆ ಧಕ್ಕೆ ತರುವಂತಿಲ್ಲ’ ಎಂದು ಒಪ್ಪಂದದಲ್ಲೊಂದು ಒಳ ಒಪ್ಪಂದ ಹಾಕಿರುವ ಅಮೆರಿಕೆಗೆ ‘ನಮ್ಮ ಆಂತರಿಕ ನೀತಿಗೂ ನೀವು ಧಕ್ಕೆ ತರುವಂತಿಲ್ಲ’ ಎಂದೇಕೆ ತಪರಾಕಿ ಹಾಕಬಾರದು?
ಹೀಗೆ ಅಮೆರಿಕದೊಂದಿಗೆ ಜಾಗರೂಕತೆಯಿಂದ ಒಪ್ಪಂದ ಮಾಡಿಕೊಂಡರೆ ಅದು ನಮ್ಮ ಮೇಲೆ ಸವಾರಿ ಮಾಡಲಗುವುದಿಲ್ಲ. ಚೀನಾ ಕೂಡ ನಮ್ಮೊಂದಿಗೆ ಸಮಾನ ದೂರದಲ್ಲಿರಲು ಪ್ರಯತ್ನ ಪಡುತ್ತದೆ. ಒಪ್ಪಂದದ ಈಗಿನ ರೂಪ ಬದಲಿಸಿ ನಮ್ಮ ಪ್ರಗತಿಗೆ ತಕ್ಕಂತೆ ಅದನ್ನು ಪುನರ್ರಚಿಸಿ ಮುಂದುವರೆಯುವುದು ಜಾಣತನ.
ಆದರೆ, ಅದನ್ನೆಲ್ಲ ಮಾಡಬಲ್ಲ, ದೇಶದ ಪ್ರಗತಿಯತ್ತ ಒಲವುಳ್ಳ ರಾಜಕಾರಣಿಗಳು ನಮ್ಮಲ್ಲಿದ್ದಾರೆಯೇ ಎನ್ನುವುದೇ ಕೋಟಿ ರುಪಾಯಿಯ ಪ್ರಶ್ನೆ!

~ ಚಕ್ರವರ್ತಿ ಸೂಲಿಬೆಲೆ

ಚಿತ್ರಕೃಪೆ :newsx.com

Comments Posted (0)