ಸೂರ್ಯವಂಶದ ಜಾಡಿನಲ್ಲಿ….

Posted by ಅರುಂಧತಿ | Posted in | Posted on 1:23 AM

ನಮ್ಮ ಹೆಮ್ಮೆಯ ಭಾರತದ ಪ್ರಾಚೀನ ಇತಿಹಾಸ ನಮಗೆಷ್ಟು ತಿಳಿದಿದೆ? ಯಾರೆಂದರೆ ಅವರು ‘ನಮ್ಮವರು ಇತಿಹಾಸವನ್ನು ಬರೆದಿಡಲಿಲ್ಲ’ ಎಂದು ದೂರುವರೇ ಹೊರತು, ಸ್ವಾರಸ್ಯಕರ ಕಾವ್ಯಗಳ ಮೂಲಕ, ವೇದೋಪನಿಶತ್ತು, ಪುರಾಣಗಳ ಮೂಲಕ ನಮ್ಮ ರಾಷ್ಟ್ರದಲ್ಲಿ ಜನಿಸಿ ಚಕ್ರವರ್ತಿಗಳಾಗಿ ಮೆರೆದ ಶ್ರೇಷ್ಠ ಅರಸರ ಬಗ್ಗೆ ಅರಿಯುವ ಆಸಕ್ತಿ ತೋರುವವರೇ ಇಲ್ಲ. ಬೇರು ಗಟ್ಟಿಯಾದರೆ ತಾನೆ ಗಿಡ ಗಟ್ಟಿಯಾಗುವುದು? ನಾವು ನಮ್ಮ ಪೂರ್ವಜರ ಭವ್ಯ ಇತಿಹಾಸವನ್ನು ಅರಿಯಬೇಕು. ಹಿಂದಿನವರ ಶ್ರೇಷ್ಠತೆ- ಸಾಧನೆಗಳು ನಮ್ಮ ಮುಂದಿನ ಹೆಜ್ಜೆಗಳಿಗೆ ಮಾರ್ಗದರ್ಶಿಯಾಗಬಲ್ಲಂಥವು. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಹೆಜ್ಜೆಗಳನ್ನು ಅರಿಯುವ, ಆ ಬಗ್ಗೆ ನಮಗೆ ತಿಳಿದ ಮಾಹಿತಿಗಳನ್ನು ನಿಮಗೊದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಹೊರಟಿದ್ದೇನೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಬೇಕಾಗುವುದರಿಂದ, ಎಲ್ಲಾದರೂ ಪಾಠಾಂತರವಿದ್ದರೆ, ದೋಷ ನುಸುಳಿದ್ದರೆ ಅವಶ್ಯವಾಗಿ ತಿದ್ದಿ, ತಿಳಿಹೇಳಿ. ನಮ್ಮ ಪ್ರಯತ್ನದಲ್ಲಿ ಜೊತೆಯಾಗಿ…

~ ~ ~

ನಮ್ಮ ಪ್ರಪ್ರಾಚೀನ ಇತಿಹಾಸದಲ್ಲಿ ಬಹು ಮುಖ್ಯವಾಗಿ ಕೇಳಿಬರುವ ರಾಜ ವಂಶಗಳು- ಸೂರ್ಯ ವಂಶ ಮತ್ತು ಚಂದ್ರ ವಂಶಗಳು.
ಹೆಸರೇ ಸೂಚಿಸುವಂತೆ ಸೂರ್ಯ ವಂಶದ ಆದಿ ಸೂರ್ಯನಿಂದಲೇ. ವಿವಸ್ವಾನ- ಕಿರಣಗಳ ಒಡೆಯ- ಸೂರ್ಯ. ಆದ್ದರಿಂದ ಸೂರ್ಯನಿಗೆ ವಿವಸ್ವಂತ ಎನ್ನುವ ಹೆಸರೂ ಇದೆ. ಸೂರ್ಯ ಪುತ್ರರು ವೈವಸ್ವತ ಎಂದು ಕರೆಸಿಕೊಳ್ಳುವರಷ್ಟೆ? ಈ ಪ್ರತಿಯೊಂದು ಮನ್ವಂತರದ ಮೂಲ ಪುರುಷನನ್ನು ‘ಮನು’ ಎಂದು ಕರೆಯಲಾಗುತ್ತದೆ. ಆತನಿಂದಲೇ ಮಾನವ ಕುಲದ ಆರಂಭವಾಗುವುದು. ಒಟ್ಟು ಹದಿನಾಲ್ಕು ಮನ್ವಂತರಗಳಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಮನ್ವಂತರ ‘ವೈವಸ್ವತ ಮನ್ವಂತರ’. ಸೂರ್ಯ ಪುತ್ರ ಶ್ರಾದ್ಧ ದೇವ ಮನುವೇ ಈ ಮನ್ವಂತರದ ಒಡೆಯ. ಶ್ರಾದ್ಧದೇವ ಮನುವಿನ ಮುಂದಿನ ಪೀಳಿಗೆ ‘ಸೂರ್ಯ ವಂಶ’ವೆಂದೇ ಖ್ಯಾತ. ಈ ಸೂರ್ಯ ವಂಶದ ಚಕ್ರಾಧಿಪತ್ಯ ಆರಂಭವಾಗುವುದು ಶ್ರಾದ್ಧದೇವನ ಪುತ್ರ ಇಕ್ಷ್ವಾಕುವಿನ ಮೂಲಕ. ಇಕ್ಷ್ವಾಕು ಚಕ್ರವರ್ತಿ ಶ್ರೀ ರಾಮನ ವಂಶದ ಮೂಲ ಪುರುಷ.
ಮತ್ತೊಂದು ಪ್ರಸಿದ್ಧ ವಂಶ- ಚಂದ್ರ ವಂಶದ ಮೂಲ ಕಾರಣನೂ ಶ್ರಾದ್ಧ ದೇವನೇ. ಈತನ ಪುತ್ರ ಸುದ್ಯುಮ್ನ ‘ಇಳಾ’ ಎನ್ನುವ ಸ್ತ್ರೀಯಾಗಿ ಚಂದ್ರ ಪುತ್ರ ‘ಬುಧ’ನನ್ನು ವರಿಸಿ ಮಕ್ಕಳನ್ನು ಪಡೆದಳು. ಈ ಮಕ್ಕಳಿಂದ ಚಂದ್ರ ವಂಶದ ಉದಯವಾಯಿತು.

ಸೂರ್ಯ ವಂಶದ ಆದಿ ಪುರುಷರು ಮತ್ತು ಭರತ ಖಂಡವನಾಳಿದ (ಪ್ರಾಚೀನ ಭಾರತದ ವ್ಯಾಪ್ತಿ- ವಿಸ್ತೀರ್ಣಗಳ ಬಗ್ಗೆ ಬೇರೊಂದು ಲೇಖನದಲ್ಲಿ ಚರ್ಚಿಸೋಣ) ಸೂರ್ಯ ವಂಶದ ರಾಜರುಗಳ ಕಿರು ಮಾಹಿತಿ ಹೀಗಿದೆ:


ಬ್ರಹ್ಮ: ಹತ್ತು ಪ್ರಜಾಪತಿಗಳಿಗೆ ಜನ್ಮ ನೀಡಿದ. ಅವರಲ್ಲೊಬ್ಬ- ಮರೀಚಿ. ಮರೀಚಿಯ ಮಗ ಕಶ್ಯಪ. ಕಶ್ಯಪ ಮಾನವ ಕುಲದ ತಂದೆ. ಈತನ ಪತ್ನಿಯರಲ್ಲೊಬ್ಬಳು ಅದಿತಿ. ಅವಳ ಮಕ್ಕಳು ‘ಆದಿತ್ಯ’ರು. ದ್ವಾದಶ ಅದಿತ್ಯರು: ಅಂಶುಮಾನ್, ಆರ್ಯಮಾನ್, ಭಗ, ಧೂತಿ, ಮಿತ್ರ, ಪೂಷನ್, ಶಕ್ರ, ಸವಿತೃ, ತ್ವಷ್ಟೃ, ವರುಣ, ವಿಷ್ಣು ಮತ್ತು ವಿವಸ್ವಾನ್ (ಸೂರ್ಯ)

ವಿವಸ್ವಂತನ ಪುತ್ರರಲ್ಲಿ ಶ್ರಾದ್ಧ ದೇವ ಒಬ್ಬ. ಈತ ಅಯೋಧ್ಯಯ ನಿರ್ಮಾರ್ತೃ. ಶ್ರಾದ್ಧ ದೇವನ ಮಕ್ಕಳು- ವೇನ, ಧ್ರಿಶ್ನು, ನರಿಷ್ಯಂತ, ನಭಗ, ಇಕ್ಷ್ವಾಕು, ಕರೂಷ, ಶರ್ಯಾತಿ, ಪ್ರಿಶಧ್ರು, ನಭಗಾರಿಷ್ಟ, ಮತ್ತು ಸುದ್ಯುಮ್ನ (ಇಳಾ).

ಇಕ್ಷ್ವಾಕು, ಸೂರ್ಯವಂಶದ ಮೊತ್ತ ಮೊದಲ ಚಕ್ರವರ್ತಿ. ಈತನ ನೂರು ಮಕ್ಕಳಲ್ಲಿ ಐವತ್ತು ಮಂದಿ ಉತ್ತರಪಥವನ್ನೂ, ಐವತ್ತು ಮಂದಿ ದಕ್ಷಿಣಾಪಥವನ್ನೂ ಆಳಿದರು. ಈತನ ಮುಂದಿನ ಪೀಳಿಗೆಯ ಪಟ್ಟಿ ಇಲ್ಲಿದೆ:



ಇಕ್ಷ್ವಾಕು, ವಿಕುಕ್ಷಿ (ಶಶಾದ), ಪುರಂಜಯ (ಕಕುತ್ಸ್ಥ), ಅನರಣ್ಯ , ಪೃಥು, ವಿಶ್ವಗಾಶ್ವ, ಆರ್ದ್ರ (ಚಂದ್ರ) , ಯವನಾಶ್ವ , ಶ್ರವಸ್ತ,
ಬೃಹದಾಶ್ವ, ಕುವಲಾಶ್ವ(ದುಂಧುಮಾರ) , ದೃಢಾಶ್ವ , ಪ್ರಮೋದ, ಹರ್ಯಶ್ವ , ನಿಕುಂಭ, ಶಾಂತಾಶ್ವ , ಕೃಷ್ಣಾಶ್ವ, ಪ್ರಸೇನಜಿತ ಯವನಾಶ್ವ , ಮಂಧಾತ , ಪುರುಕುತ್ಸ್ಥ , ತ್ರದ್ದಸ್ಯು, ಸಂಭೂತ, ಅನರಣ್ಯ , ತ್ರಶದಶ್ವ, ಹರ್ಯಶ್ವ, ವಸುಮಾನ್ತ್ರಿಧನ್ವ, ತ್ರೈಯರುಣ ಸತ್ಯವ್ರತ (ತ್ರಿಶಂಕು), ಹರಿಶ್ಚಂದ್ರ , ರೋಹಿತಾಶ್ವ , ಹಾರೀತ, ಚಂಚು, ವಿಜಯ , ರುರುಕ್ , ವೃಕ , ಬಾಹು(ಅಸಿತ), ಸಗರ, ಅಸಮಂಜ, ಅಂಶುಮಂತ, ದಿಲೀಪ, ಭಗೀರಥ , ಶ್ರುತ, ನಭಗ, ಅಂಬರೀಷ, ಸಿಂಧು ದ್ವೀಪ, ಪ್ರತಾಯು;

ಶೃತುಪರ್ಣ, ಸರ್ವ ಕಾಮ, ಸುದಾಸ , ಸೌದಾಸ (ಮಿತ್ರಸಹ), ಸರ್ವಕಾಮ, ಅನರಣ್ಯ, ನಿಘ್ನ , ರಘು, ದುಲಿದುಃ, ಖಟ್ವಾಂಗ (ದಿಲೀಪ), ರಘು (ದೃಗ್ಬಾಹು- ಈತನಿಂದಲೇ ‘ರಘುವಂಶ’ ಎಂಬ ಹೆಸರು ಬಂದಿದ್ದು), ಅಜ, ದಶರಥ , ಶ್ರೀ ರಾಮ, ಲವ , ಅತಿಥಿ , ನಿಷಧ, ನಳ, ನಭ, ಪುಂಡರೀಕ, ಕ್ಷೇಮಂಧವ, ದೇವನೀಕ, ರುರು, ಪರಿಪತ್ರ , ಬಲ, ಉಕ್ತ, ವಜ್ರನಾಭ , ಶಂಖ, ವಿಶ್ವಶಃ , ಹಿರಣ್ಯ ನಾಭ, ಪುಷ್ಯ, ಧ್ರುವ ಸಂಧಿ, ಸುದರ್ಶನ;

ಅಗ್ನಿವರ್ಣ , ಶೀಘ್ರಗ , ಮರು, ಪ್ರಸೂತ , ಸುಸಂಧಿ, ಅಮರ್ಷ, ವಿಶ್ರುತ್ವನ್, ವಿಶ್ರಬಾಹು, ಪ್ರಸೇನಜಿತ, ತಕ್ಷಕ , ಬೃಹದ್ಬಲ (ಭಾರತ ಯುದ್ಧದ ಅವಧಿ), ಅರುಕ್ಷಯ, ವತ್ಸವ್ಯೂಹ , ಪ್ರತಿವ್ಯೋಮ, ದಿವಾಕರ, ಸಹದೇವ , ಬೃಹದಶ್ವ, ಭಾನುರಥ , ಪ್ರತಿತಾಶ್ವ, ಸುಪ್ರತೀಕ, ಮರುದೇವ;

ಸುನಕ್ಷತ್ರ, ಅಂತರಿಕ್ಷ , ಸುಷೇಣ, ಅನಿಭಜಿತ್ , ಬೃಹದ್ಭಾನು , ಧರ್ಮಿ, ಕೃತಂಜಯ, ರಣಂಜಯ, ಸಂಜಯ,
ಪ್ರಸೇನಜಿತ (ಬುದ್ಧನ ಸಮಕಾಲೀನ), ಕ್ಷುದ್ರಕ, ಕುಲಕ, ಸುರಥ, ಸುಮಿತ್ರ ( ಸೂರ್ಯವಂಶದ ಕೊನೆಯ ಅರಸ. ಈತ ನವ ನಂದರಲ್ಲಿ ಒಬ್ಬನಾಗಿದ್ದ . ಮಹಾಪದ್ಮ ನಂದನಿಂದ ಸೋಲಿಸಲ್ಪಟ್ಟು ಅಯೋಧ್ಯೆಯಿಂದ ರೋಹತಕ್ಕೆ ತೆರಳಿದ. ಈತನ ಮಗ ಕೂರ್ಮ ರೋಹತರ ಮೇಲೆ ಅಧಿಪತ್ಯ ಸ್ಥಾಪಿಸಿದ.)

( ಮಾಹಿತಿ ಆಧಾರ: ವಿಷ್ಣು ಪುರಾಣ, ಭಾಗವತ ಪುರಾಣ ಮತ್ತು ಅಂತರ್ಜಾಲ ತಾಣಗಳು)

Comments Posted (1)

  1. ವಾಸ್ಥವಾಂಶ ಮರೆಮಾಚುವ ಕಲೆ ಈ ಚಕ್ರವರ್ತಿ ಸೂಲಿಬೆಲೆಗೆ ಬಹಳ ಸುಲಭವಾಗಿ ಸಿಧ್ಧಿಸಿದೆ ವಿವರವಾಗಿ ಹೇಳಬೇಕು ಅಂದರೆ ಸುಳ್ಳು ಕಥೆಗಳ ಜನಕ ಎಂದು ಸಂಭೋದಿಸಿದರೆ ತಪ್ಪಾಗಲಾರದು #ಮೂಲನಿವಾಸಿ