ನನ್ನ ಬಗ್ಗೆ

Posted by ಅರುಂಧತಿ | Posted in | Posted on 4:44 AM

ಹುಟ್ಟಿದ್ದು ಹೊನ್ನಾವರ, ಓದಿದ್ದು- ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ. ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ.

ವಿದ್ಯಾಭ್ಯಾಸ ಪೂರೈಸಿದ ನಂತರ ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶ. ಸ್ವದೇಶಿ ಆಂದೋಲನಕ್ಕೆ ಸೇರ್ಪಡೆ. ಆಂದೋಲನದ ಮುಖ ಪತ್ರಿಕೆ ‘ಹೊಸ ಸ್ವಾತಂತ್ರ್ಯದ ಬೆಳಕು’ ಸಂಪಾದಕನಾಗಿ ಕಾರ್ಯ ನಿರ್ವಹಣೆ. ಇದೇ ವೇಳೆಗೆ ವಿಜಯ ಕರ್ನಾಟಕದಲ್ಲಿ ‘ಮೇರಾ ಭಾರತ್ ಮಹಾನ್’ ಕಿರು ಅಂಕಣ ಬರಹ ಪ್ರಾರಂಭ. ಮುಂದೆ ವಿಜಯ ಕರ್ನಾಟಕದಲ್ಲಿ ‘ಹೋಂಗೆ ಕಾಮ್ಯಾಬ್’ ಅಂಕಣ ಬರಹಗಾರನಾಗಿ ಮುಂದುವರಿಕೆ. ಗರ್ವ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕನ ಜವಾಬ್ದಾರಿ. ಕರ್ಮವೀರ ಪತ್ರಿಕೆಯಲ್ಲಿ ‘ಲೈಫ್ ಸ್ಕ್ಯಾನ್’ ಅಂಕಣ ಸರಣಿ.

ಸ್ವತಂತ್ರ ಕೃತಿಗಳು:

  • ಮೇರಾ ಭಾರತ್ ಮಹಾನ್
  • ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್
  • ನೆಹರೂ ಪರದೆ ಸರಿಯಿತು
  • ಪೆಪ್ಸಿ ಕೋಕ್ ಅಂತರಾಳ
  • ಸ್ವಾತಂತ್ರ್ಯ ಮಹಾ ಸಂಗ್ರಾಮ ೧೮೫೭- ಒಂದು ವಾಕ್ಚಿತ್ರ
  • ಭಾರತ ಭಕ್ತ ವಿದ್ಯಾನಂದ

ಅನುವಾದಿತ ಹಾಗೂ ಸಂಪಾದಿತ ಕೃತಿಗಳು: ಭಾರತ ಮಾತೆಯ ಕರೆ, ಸ್ವದೇಶೀ ಮತ್ತು ಗೋ ಚಿಕಿತ್ಸೆ, ಮೊದಲಾದವುಗಳು.

ಈ ಟೀವಿಯಲ್ಲಿ ‘ನಿವೇದನ’ ಕಾರ್ಯಕ್ರಮದ ನಿರೂಪಣೆ. ಇದೇ ವಾಹಿನಿಗಾಗಿ ‘ತೀರ್ಥ ಯಾತ್ರೆ’ ಕಾರ್ಯಕ್ರಮ ನಿರೂಪಣೆ. ಜೀ ಟೀವಿಯ ‘ಸಂಧ್ಯಾರಾಧನೆ’ ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ. ಉದಯ ಟೀವಿಯ ಹರಟೆ ಕಾರ್ಯಕ್ರಮ ಮತ್ತು ಕನ್ನಡ ಕಸ್ತೂರಿ ವಾಹಿನಿಯಲ್ಲಿ ಜಾಣರ ಜಗಲಿ ಕಾರ್ಯಕ್ರಮಗಳಲ್ಲಿ ನಿರಂತರ ಸಹಭಾಗಿ.

ಬೆಂಗಳೂರು ಆಕಾಶವಾಣಿಯ ಜ್ಞಾನವಾಣಿ ವಾಹಿನಿಯಲ್ಲಿ ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಸರಣಿ ಉಪನ್ಯಾಸ, ಮತ್ತಿತರ ಉಪನ್ಯಾಸಗಳು.

ನಾಡು- ನುಡಿಯ ಕುರಿತಂತೆ ಉಪನ್ಯಾಸಗಳ ನೀಡಿಕೆ. ಈ ನಿಟ್ಟಿನ್ಲಲ್ಲಿ ರಾಜ್ಯಾದ್ಯಂತ ನಿರಂತರ ಪ್ರವಾಸ.

ಜಾಗೋ ಭಾರತ್ ತಂಡದ ಮೂಲಕ ವಿವಿಧೆಡೆ ದೇಶಭಕ್ತಿಗೀತೆಗಳ ಪ್ರಸ್ತುತಿ.

ರಾಷ್ಟ್ರ ಶಕ್ತಿ ಕೇಂದ್ರ ಸಂಘಟನೆಯ ಸ್ಥಾಪನೆ. ಇತರ ಸದಸ್ಯರೊಡಗೂಡಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳ ಆಯೋಜನೆ.

Comments Posted (0)