ಇತಿಹಾಸ ದರ್ಶನ - ೨
Posted by ಅರುಂಧತಿ | Posted in Videos | Posted on 3:39 AM
ಮೇ ತಿಂಗಳ ಕಾರ್ಯಕ್ರಮಗಳು
ಎಪ್ರೀಲ್ ತಿಂಗಳ ಕಾರ್ಯಕ್ರಗಳು
~~~~~~~~~~~~~~~~~~~~~~~~~~~
ಭಾಷಣಗಳ ಕುಟ್ಟುಟ್ಟಿದ್ದ ಸರದಾರ ,
ಮಹಿಳಾಮಣಿಗಳ ಚಿತ್ತಚೋರ ,
ಪಂಡಿತ್ ಜವಾಹರಲಾಲ್ ನೆಹೆರೂ. . .
ಬಹುಪರಾಖ್ !ಬಹುಪರಾಖ್ ! ಬಹುಪರಾಖ್ !
~~~~~~~~~~~~~~~~~~~~~~~~~~~
ಅದೊಂದು ಕಾಲವಿತ್ತು.ನೆಹೆರು ಎಂದರೆ ಸಾಕು,ಜನ ಮುಗಿಬಿಳುತ್ತಿದ್ದರು.ವೇದಿಕೆಯ ಮೇಲೆ ನೆಹೆರು ಕಂಡರೆ ಸಾಕು,ಕುಚ್ಚೆದ್ದು ಕುಣಿಯುತ್ತಿದ್ದರು.ಅವರು ಭಾರತೀಯರ ಆರಾಧ್ಯ ದೈವರಾಗಿದ್ದರು.ಯುವ ಚಿಂತಕರೂ ಕಣ್ಮಣಿಗಳೂ ಆಗಿದ್ದರು.ಮಹಿಳೆಯರ ಚಿತ್ತಚೋರ ಎನಿಸಿಕೋಂಡಿದ್ದರು.ಎಲ್ಲಕ್ಕೂ ಮಿಗಿಲಾಲಿ ಮಹಾತ್ಮಆಂಧಿಯ ಬಲಗೈ ಬಂಟ ಎಂಬ ಆತು ಎಲ್ಲೆಲ್ಲೂ ಪ್ರಚಲಿತವಾಇತ್ತು.
ಆದರೆ. . .
ಅಸಲಿತ್ತು ಗೋತ್ತಿದ್ದುದು ಅವರನ್ನು ಹತ್ತಿರದಿಂದ ಬಲ್ಲವರಿಎ ಮಾತ್ರ.ಗಾಂಧಿ ಆಶ್ರಮ ಎಂದರೆ ಪವಿತ್ರವಾದ ಸ್ಥಳ.ಅಲ್ಲಿಗ್ಗೆ ಹೋಗುವವರೆಲ್ಲರೂ ಎಂಥವರೇ ಆಗಿರಲಿ ಆಂಧಿಜಿಯ ನುಯಮಗಳಿಗೆ ಬಾಗಿ ನಡೆಯುವವರೇ.ಅಶ್ಠಕ್ಕೂ ಇಡ್ಯ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರಬಿಂದು ಅದೇ ಆಇತ್ತಲ್ಲವೇ?ಅಲ್ಲಿಗೆ ಖಾದಿ,ಧೋತಿ,ಜುಬ್ಬಾ ಧ್ರಿಸಿ ಬರುತ್ತಿದ್ದ ನೆಹೆರು ಭಾಷಣಗಳ ಸರಮಾಲೆ ಬಿಗಿಯಿತ್ತಿದ್ದರು ಖಾದಿಧಾರಿಅಗ್ಳೋಂದಿಗೆ ನಾಟಕೀಯ ಸಂಭಾಷಣೆಯಲ್ಲಿ ನಿರತರಾಗುತ್ತಿದ್ದರು.ಸ್ವಲ್ಪ ಹೋತ್ತಿನಲ್ಲಿಯೇ ಭಾರೀ ಮರವೋಂದರ ಹಿಂದೆ ಅವಿತು ಸಿಅರೇಟು ಹೋತ್ತಿಸಿ,ಭುಸಭುಸನೆ ಹೊಗೆಯೆಳೆದು ಅದನ್ನು ಕಾಲಿನಿಂದ ಹೋಸಕಿ ಓಡಿ ಬಂದುಬಿಡುತ್ತಿದ್ದರು.ಗಾಂಧೀಜಿಯ ಅನುಯಾಯಿಅಳು ಧೂಮಪಾನ - ಮಧ್ಯಪಾನವನ್ನೆಲ್ಲ ಬಿಟ್ಟಿದ್ದರು.ಆದರೆ ನೆಹೆರು ಮಾತ್ರ ಮೇಲ್ನೋಟಕ್ಕೆ ಗಾಂಧಿಜೀಯ ಅನುಯಾಯಿಯಾಗಿದ್ದರೂ,ಒಳಗೆ ಕಾಮನೆಗಳನ್ನು ತೀರಿಸಿಕೊಳ್ಳುವ ಚಟ ಬಿಟ್ಟಿರಲಿಲ್ಲ.ವಿದೇಶ ಪ್ರಯಾಣ ಎಂದು ನೆಹೆರು ಯುರೋಪ್ ರಾಷ್ಟ್ರಗಳಿಗೆ ಅಖಿಲ ಭಾರತ ಕಾಂಗ್ರೇಸ್ ಕಮಿಟಿಯ ಪರವಾಗಿ ಹೋಉತ್ತಿದ್ದರಲ್ಲ. . ., ಆಗಲೂ ಅಷ್ಟೇ.ಹಡಗೂ ಹತ್ತುವವರೆಗೂ ಖಾದಿ ಧರೆಸಿ ಫೋಸು ಕೊಡುತ್ತಿದ್ದರು.ಹಡಗೇರಿದ ಕೂಡಲೇ ಖಾದಿ ಕಿತ್ತೆಸೆದು ಸೂಟು - ಬೂಟುಗಳ ಸಿಂಗಾರ ಮಾಡಿಕೋಳ್ಳುತ್ತಿದ್ದರು. ಇವೆಲ್ಲವನ್ನು ಆಗಿನ ಒಂದಷ್ಟು ಪತ್ರಿಕೇಗಳು ಸುದ್ದಿ ಮಾಡಿ,ನೆಹೆರು ಮೈಮೆಲೆಳೆದುಕೋಂಡಿದ್ದ ಪರದೆ ಸರಿಸಿದ್ದವು.ಅದೊಂದ್ಸಲ ಅಭಿಮಾನಿಯ್ಪೊಬ್ಬ ಜನಸಮೂಹದ ಮಧ್ಯ್ದದಲ್ಲಿ ನೆಹೆರೂ ಕೈಯಿಂದ ಆಟೋಗ್ರಾಫ್ ಪಡೆಯಲು ಮುನ್ನುಗ್ಗಿದ.ಪುಸ್ತಕವನ್ನು ಪೆನ್ನನ್ನು ಕೈಗಿತ್ತ ದುರದ್ರುಷ್ಟವಶಾತ್ ಆ ಪೆನ್ನು ಸರಿಯಾಗಿ ಬರೆಯಲಿಲ್ಲ. ನೆಹೆರೂ ಕೆಂಡಾಮಂಡಲವಾಗಿಬಿಟ್ಟರು.ಆ ಅಭಿಮಾನಿಯ ಕೆನ್ನೆ ಛಟಾರನೆ ಬಾರಿಸಿ ಬಿರಬಿರನೆ ನಡೆದರು.ಅದೆಷ್ಟು ಅಹಂಕಾರ ನೋಡಿ!ಅವರ ಬಾಯಿಂದ ಯಾವಾಗಲು ಬರುತ್ತಿದ್ದ ಅವಾಚ್ಯ ಶಬ್ದಗಳು ಅಷ್ಟು ಜನರ ಮುಂದೆ ಆ ಯುವಕನಿಗೆ ಅಭಿಷೇಕವಾಯ್ತು.ಆತ ಅವಮಾನಿತನಾಇ ತಲೆತಗಿಸಿದ.
ಭಾರತೀಯರಿಗೆ, ‘ನದಿ’ ಬರೀ ಹರಿಯುವ ನೀರು ಮಾತ್ರವಲ್ಲ. ಆಕೆ ‘ನದೀ’ ದೇವತೆ. ಹೀಗಾಗಿ ವೇದ ವ್ಯಾಸರು ನದಿಗಳನ್ನು ವಿಶ್ವ ಮಾತರಃ ಎಂದಿದ್ದಾರೆ. ಋಗ್ವೇದದಲ್ಲಿ ನದಿಗಳನ್ನು ‘ಆಪೋ ದೇವತಾ’ ಎಂದು ಕರೆದು ಗೌರವಿಸಿದ್ದಾರೆ. ಅದು ಪಾವನ ತೀರ್ಥ. ಮೈಮನ ಶುದ್ಧಗೊಳಿಸುವ ಪವಿತ್ರ ಸಾಧನ. ಹಾಗಾಗಿ ನಮ್ಮ ಪ್ರಯಾಣಗಳೆಲ್ಲವು ತೀರ್ಥಯಾತ್ರೆ. ನಮ್ಮ ಯಾತ್ರೆಗಳಲೆಲ್ಲಾ ತೀರ್ಥಸ್ನಾನಕ್ಕೆ ಬಹು ಪ್ರಾಮುಖ್ಯತೆ.
ನಮ್ಮ ರಾಷ್ಟ್ರದ ಎಲ್ಲಾ ನದಿಗಳು, ಅಷ್ಟ ಕುಲ ಪರ್ವತಗಳಲ್ಲಿ ಜನ್ಮ ತಾಳುತ್ತವೆ. ಇಲ್ಲಿ ಕೆಲವು ವೇದ-ಪುರಾಣೋಕ್ತ ನದಿಗಳ ಪುರಾತನ ಹಾಗೂ ಇಂದಿನ ಬಳಕೆಯ ಹೆಸರುಗಳನ್ನು ನೀಡಲಾಗಿದೆ.
ಹಿಮಾಲಯ
“ದೇವತಾತ್ಮಾ ಹಿಮಲಯಃ” ಎಂದು ಹಿಮಾಲಯ ಪರ್ವತ ಶ್ರೇಣಿಯನ್ನು ಶಾಸ್ತ್ರಗಳು ಬಣ್ಣಿಸಿವೆ. ಹಿಮಾಲಯದಲ್ಲಿ ಜನ್ಮ ತಳೆವ ನದಿಗಳು, ಪೂರ್ವ ಹಾಗೂ ಪಶ್ಚಿಮಗಳೆರಡೂ ದಿಕ್ಕಿಗೆ ಹರಿಯುವುದು ವಿಶೇಷವಾಗಿದೆ.
ಪೂರ್ವಾಭಿಮುಖ ನದಿಗಳು: ಗಂಗಾ, ಯಮುನಾ, ಗೋಮತಿ, ಸರಯೂ (ಗೋಗ್ರ),
ರಕ್ಷು (ರಾಮ ಗಂಗಾ) ಗಂಡಕಿ, ಕೌಶಿಕಿ (ಕೇಶಿ) ಲೋಹಿತ್ಯಾ (ಬ್ರಹ್ಮಪುತ್ರಾ)
ಪಶ್ಮಿಮಾಭಿಮುಖ ನದಿಗಳು : ಸರಸ್ವತಿ, ಸಿಂಧೂ, ಚಂದ್ರಭಾಗಾ (ಜೀನಬ್) ಶತ್ರುರಿ, (ಸಟ್ಲೇಜ್) ವಿತಸ್ತಾ (ಝೇಲಂ) ಇರಾವತಿ (ರಾವಿ) ತೂಹು, ಬಹುರಾ (ರಾಸಿ) ವೃಷಧೃತಿ (ಚಿತುಗಾ) ವಿಶಾಸಾ (ಬಿಯಾಸ್) ದೇವಿಕಾ (ಡೇನ್)
ಅರಾವಳಿ ಅಥವಾ ಪಾರಿಯಾತ್ರ
ಇಲ್ಲಿ ಹುಟ್ಟುವ ಎಲ್ಲಾ ಪ್ರವಾಹಗಳು ಪಶ್ಚಿಮ ಸಮುದ್ರ ಸೇರುತ್ತವೆ. ಹಲವು ನದಿಗಳು, ಪ್ರಮುಖ ಪ್ರವಾಹಗಳಲ್ಲಿ ಒಂದಾಗಿ, ಸಮುದ್ರ ಸೇರುತ್ತವೆ. ಹಿಮಾಲಯದ ನದಿಗಳಿಗೆ ಹೋಲಿಸಿದಾಗ ಉದ್ದ ಹೆಚ್ಚೇನೂ ಇಲ್ಲವಾದರೂ, ಇವು ಹರಿಯುವ ಪಾತ್ರದ ಪರಿಸರ ಅತ್ಯಂತ ರಮಣೀಯವಾಗಿ ಕಂಗೊಳಿಸುತ್ತದೆ.
ವೇದಸ್ಮೃತಿ (ಬನಾಸ್), ವೇದವತಿ (ಬೀರಫ್) ವೃತ್ರಘ್ನ (ಉತ್ತಂಗನ) ವೇಣ್ಯ, ನಂದಿನಿ (ಸಾಬರ ಮತಿ), ಸದಾನೀರ್ (ಪಾರ್ವತಿ), ಚರ್ಮಣ್ಯತಿ (ಚಂಬಲ್) ವಿದುಶ (ಬೇಸ್) ವೇಣುಮತಿ (ಬೇತಾರ್) ಸತ್ತಾ ಅಥವಾ ಆವಂತಿ ಮೊದಲಾದವು ಅರಾವಳಿಯಿಂದ ಹುಟ್ಟುತ್ತವೆ.
ಋಕ್ಷ ಪರ್ವತ
ಮಂದಾಕಿನಿ, ದಶಾರ್ಣ (ಧಸಾನ್), ಚಿತ್ರಕೂಟ, ತಮಸಾ (ತೋಸ್) ಪಿಪ್ಪಲಿ, ಶ್ರೇಣಿ, (ದೈಸುನೇ) ಪಿಶಾಚಿಕಾ, ಕರಮೋದಾ (ಕರ್ಮನಾಶಾ), ನೀಲೋತ್ಪಲಾ, ವಿಮಲಾ (ಬೇರಾಸ್), ಚಂಚಲಾ (ಜಮ್ನಿ), ಬಾಲುವಾಹಿನಿ, ಶ್ರುತಿ ಮಿತಿ, ಶಕುಲಿ, ತ್ರಿದಿವಾ ಮೊದಲಾದ ವೇದೋಕ್ತ, ಪುರಾಣೋಕ್ತ ಪುಣ್ಯ ಪ್ರವಾಹಗಳು, ಇಲ್ಲಿಂದ ಹುಟ್ಟಿ ಹರಿಯುತ್ತವೆ.
ಇವುಗಳು, ನೇರವಾಗಿ, ಸಾಗರ ಸೇರುವುದಿಲ್ಲ. ಬದಲಾಗಿ, ಮುಖ್ಯ ಪ್ರವಾಹಗಳೊಂದಿಗೆ ಸಂಗಮಿಸಿ, ಸಂಭ್ರಮಿಸುತ್ತವೆ. ರಾಮಾಯಣಾದಿ ಇತಿಹಾಸ ಘಟನೆಗಳು, ಪುರಾಣೋಕ್ತ ವಿವಿಧ ಪ್ರಸಂಗಗಳಿಗೆ ಈ ನದಿಗಳು ಸಾಕ್ಷಿಯಾಗಿರುವುದರಿಂದ, ಜನ ಮಾನಸದಲ್ಲಿ ಶ್ರದ್ಧಾ ಕೇಂದ್ರಗಳಾಗಿ ವಿಕಸಿತವಾಗಿವೆ.
ವಿಂಧ್ಯ ಪರ್ವತ
ವಿಂಧ್ಯ ಪರ್ವತದ ಪ್ರವಾಹಗಳು, ದಕ್ಷಿಣಾಭಿಮುಖವಾಗಿ ಪೂರ್ವ ದಿಕ್ಕಿಗೆ ಹರಿಯುವಂತೆ, ಕೆಲವು ಉತ್ತರಾಭಿಮುಖಿಯಾಗಿ ಪಶ್ಚಿಮದ ಕಡೆಗೆ ಹರಿಯುತ್ತವೆ. ಇದಲ್ಲದೆ ಸಮ ದಿಕ್ಕಿನಲ್ಲಿ ಹರಿದು, ಪೂರ್ವ, ಪಶ್ಚಿಮ ಸಮುದ್ರಗಳೆರಡೂ ಸೇರುತ್ತವೆ. ಈ ದೃಷ್ಟಿಯಿಂದ ಇವು ಹಿಮಾಲಯದ ನದಿಗಳಂತೆ ವಿಶೇಷವಾಗಿವೆ. ಪಾತ್ರದಲ್ಲಿ ಹಲವು ನದಿಗಳು, ಹಿಮಾಲಯದ ನದಿಗಳಂತೆ, ಅಗಲವೂ, ಉದ್ದವೂ ಆಗಿವೆ.
ಪಯೋಷ್ಟೋ, ನಿಬೇಂದ್ಯ (ಸೇವೋಜ್), ತಾಪಿ, ನೀಷಧಾವತಿ ವೇಣೂ (ವೈಣ ಗಂಗಾ) ವೈತರಣೀ (ಚೇತೃಣಿ) ಕುಮದ್ವತಿ (ಪೂರ್ಣರೇಖಾ) ತೇಯಾ (ಬ್ರಹ್ಮಶ್ರೀ) ಮಹಾಗೌರೇ (ದಾಮೋದರ) ಪೂರ್ಣಶೋಣ (ಸೇನಾ), ಮಹಾನದಿ, ನರ್ಮದಾ, ಇವು ವಿಂಧ್ಯಜನ್ಯ ಪ್ರಮುಖ ನದಿಗಳಾಗಿವೆ. ನರ್ಮದೆಯು ಉತ್ತರಾಭಿಮುಖವಾಗಿ ಹರಿದು, ಗುಜರಾತ್ನಲ್ಲಿ ಪಶ್ಚಿಮ ಸಮುದ್ರ ಸೇರುತ್ತಾಳೆ. ಜಗತ್ತಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಏಕಮಾತ್ರ ನದಿ ಇದಾಗಿದೆ.
ಸಹ್ಯ ಪರ್ವತ ನದಿಗಳು
ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.
ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!
ಮಲಯ ಪರ್ವತ
ಕೃತಮಾಲಾ (ಬೈಗಾಯೀ) ತಾಮ್ರ ಪರ್ಣಿ, ಪುಷ್ಪಜಾ (ಪಂಬೇಲ್) ಸತ್ಫಲಾವತಿ, ಪೂರ್ಣಾ (ಪೇರಿಯಾಲ್) ಮೊದಲಾದ ನದಿಗಳು, ‘ಮಲಯ’ ಪ್ರದೇಶದ ಪುಣ್ಯ ತೀರ್ಥಗಳೆಂದು ಹೆಸರಾಗಿವೆ. ಇವೆಲ್ಲವೂ ದಕ್ಷಿಣಾಭಿಮುಖವಾಗಿ, ಪಶ್ಚಿಮ ಸಮುದ್ರವನ್ನು ಸೇರುತ್ತವೆ. ನೈಸರ್ಗಿಕ ಗಿಡ ಮೂಲಿಕಾ ಪ್ರದೇಶಗಳಲ್ಲಿ ಹರಿದು ಬರುವುದು ಇವುಗಳ ವಿಶೇಷವಾಗಿದೆ. ಬಹು ಅಪರೂಪವಾದ ದೇವತಾರ್ಚನ ವಿಧಿಗಳು, ಇಲ್ಲಿ ರೂಢಿಗತವಾಗಿವೆ. ಆಯುರ್ವೇದಾದಿ ಔಷಧಿ eನಗಳ ದೇವತೆ ‘ಧನ್ವಂತರಿ’ಯ ಆವಾಸಸ್ಥಾನ ಮಲಯ ಪರ್ವತವಾಗಿದ್ದು, ಆತನ ದೇವಾಲಯ ಸಹ ಇಲ್ಲಿರುವುದು ವಿಶೇಷ. (ಕಾಲಟಿಯಿಂದ ೧೦ ಕಿ.ಮಿ ದೂರ)
ಮಹೇಂದ್ರ ಪರ್ವತ
ತ್ರಿಸಾಮಾ, ಋಷ ಕುಲ್ಯಾ, ಇಕ್ಷುಲಾ, ವೇಗವತಿ, ಲಾರಿ ಗೂಲಿನ, ಮಂಶಾಧಾರಾ, ಮಹೇಂದ್ರ ತನಯಾ, ಮುಂತಾದ ನದಿಗಳು ಹುಟ್ಟುತ್ತವೆ. ಉನ್ನತವಾದ ಜಲಪಾತಗಳನ್ನು ಅವು ಸೃಷ್ಪಿಸುತ್ತವೆ. ಭೋರ್ಗರತ ಇವುಗಳ ಪ್ರಮುಖ ಲಕ್ಷಣ. ಅನೇಕ ಋಷಿಗಳು ಇವುಗಳ ತೀರದಲ್ಲಿ ತಪೋನಿರತರಾಗಿದ್ದು, ಆಶ್ರಮ ನಿರ್ಮಿಸಿಕೊಂಡು ಮಂತ್ರ ದ್ರಷ್ಟಾರರೆನಿಸಿದ್ದರು.
ಶಕ್ತಿ ಪರ್ವತ
ಋಷಕಾ, ಸುಕುಮಾರಿ, ಮದಂಗಾ, ಮಂದವಾಹಿನಿ, ಕೃಪಾಮಾಶಿನಿ ಹಾಗೂ ವಾಮನ ಇಲ್ಲಿನ ಪ್ರಮುಖ ನದಿಗಳು, ಕಾಲಾನುಕ್ರಮದಲ್ಲಿ ಶಕ್ತಿ ಪರ್ವತ ಧಾರೆಗಳು, ವಿವಿಧ ಹೆಸರಿನಿಂದ ಕರೆಯಲ್ಪಟ್ಟಿವೆ. ಅದೆಷ್ಟೋ ನದಿಗಳು, ಇಂಗಿ ಹೋಗಿವೆ. ಶಕ್ತಿ ಪರ್ವತದ ಧಾರೆಗಳು, ಜಲಚರಗಳ, ವಿಶೇಷ ಆವಾಸಸ್ಥಾನವಾಗಿವೆ. ಉತ್ಕಲ ಪ್ರದೇಶದಲ್ಲಿ, ಸಮುದ್ರ ಸೇರುವ ದೊಡ್ಡ ನದಿಗಳಿಗೆ ಇವು ಉಪನದಿಗಳಾಗಿವೆ.
ನೀಲಾಂಜನರ ತಿದ್ದುಪಡಿ…
“ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.”
ಇಲ್ಲಿ ಒಂದೆರಡು ತಪ್ಪು ನುಸುಳಿವೆ.
೧. ನದಿಗಳ ಹೆಸರು ಭೀಮರಥೀ, ಕೃಷ್ಣವೇಣೀ ಎಂದು ಈಕಾರಾಂತವಾಗಿರಬೇಕಿತ್ತಲ್ವೇ?
೨. ಕಾಳಿ, ಪೂರ್ವಸಮುದ್ರವನ್ನು ಸೇರುವುದಿಲ್ಲ್. ಒಂದಷ್ಟು ದೂರ ಪೂರ್ವಕ್ಕೆ ಹರಿದು, ನಂತರ ಪಶ್ಚಿಮಕ್ಕೆ ತಿರುಗಿ ಪಶ್ಚಿಮ ಸಮುದ್ರ ಸೇರುತ್ತದೆ.
ಮತ್ತೆ ಹೀಗಂದಿರಿ:
“ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!”
ಈ ಸಾಲು ಅಷ್ಟು ಸರಿ ಇಲ್ಲ. ಕಾವೇರಿ ಹಲವು ಕಡೆ ಪಶ್ಚಿಮಕ್ಕೆ ತಿರುಗಿ ಹರಿಯುವುದಾದರೂ ಅದ್ಯಾವುದೂ ಬಹಳ ದೂರ ಇಲ್ಲ. ಮತ್ತೆ, ಕಾಳಿಯಂತೆ, ಪೂರ್ತಿ ೧೮೦ ಡಿಗ್ರಿ ತಿರುಗಿ ಮಶ್ಚಿಮದ ಕಡಲು ಸೇರುವುದೂ ಇಲ್ಲ.
ಬಹುಶಃ ಪೂರ್ವಕ್ಕೆ ಹರಿಯುತ್ತಿರುವ ನದಿಗಳಲ್ಲಿ, ಅದು ಎಲ್ಲಾದರೂ ಪಶ್ಚಿಮಕ್ಕೆ ಹರಿಯುತ್ತಿರುವ ಜಾಗವಿದ್ದರೆ, ಅದು ವಿಶೇಷವೆಂದೂ ಪವಿತ್ರವೆಂದೂ ಪೂಜಿಸುವ ಸಂಪ್ರದಾಯವಿತ್ತೇನೋ. ಅತಿ ಪ್ರಸಿದ್ಧ ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯೇ ಅಲ್ಲದೆ, ಇನ್ನೂ ಹಲವು ಕಡೆ ಕಾವೇರಿ ಪಶ್ಚಿಮವಾಹಿನಿಯಾಗಿದ್ದಾಳೆ. ಹಾಗೇ ಹೇಮಾವತಿಯೂ ಕೂಡ. ಇವಲ್ಲದೇ ಬೇರೆ ನದಿಗಳು ಹೀಗೆ ತಿರುಗಿರುವ ಸಂದರ್ಭಗಳೂ ಇದ್ದೇ ಇರುತ್ತವೆ ಎಂದು ನನ್ನೆಣಿಕೆ. ಇಲ್ಲವೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ.
-ನೀಲಾಂಜನ
ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೆ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ….. ಜೈ!!” “ವಂದೇ….. ಮಾತರಂ!!”
ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು… ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ….
ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ.
ಎಂದಿನಂತೆ ಆಂಗ್ಲರ ಕಟಕಟೆಯಲ್ಲಿ ವಿಚಾರಣೆಯ ನಾಟಕ. ಅಲ್ಲೊಂದು ಸ್ವಾರಸ್ಯಕರ ಸಂಭಾಷಣೆ:
ನ್ಯಾಯಾಧೀಶ: ನಿನ್ನ ಹೆಸರೇನು?
ಹುಡುಗ: ಆಜಾದ್!
ನ್ಯಾ: ತಂದೆಯ ಹೆಸರು?
ಹು: ಸ್ವಾತಂತ್ರ್ಯ
ನ್ಯಾ: ಮನೆ ಎಲ್ಲಿದೆ?
ಹು: ಸೆರೆಮನೆಯೇ ನನಗೆ ಮನೆ!!
ಎರಡೂ ಕೈಸೇರಿಸಿ ಹಾಕಿದರೂ ಕೋಳ ತುಂಬದ ಪುಟ್ಟ ಹುಡುಗನ ಕೆಚ್ಚೆದೆ ಆ ಬಿಳಿಯನಿಗೆ ಮತ್ಸರ ಮೂಡಿಸಿರಬೇಕು. ಹದಿನೈದು ಛಡಿ ಏಟುಗಳ ಶಿಕ್ಷೆ ವಿಧಿಸಿಬಿಟ್ಟ.
ಆದರೇನು? ‘ವಂದೇ ಮಾತರಂ’ ಎನ್ನುವ ಮತ್ತೇರಿಸುವ, ಮೈಮರೆಸುವ ಘೋಷ ವಾಕ್ಯದ ಎದುರು ಯಾವ ಪೆಟ್ಟು ತಾನೆ ನೋವುಂಟು ಮಾಡಬಹುದಾಗಿತ್ತು ಆ ಎಳೆಯ ದೇಶಭಕ್ತನಿಗೆ?
ಶಿಕ್ಷೆಯುಂಡು ಹೊರಬಂದ ಬಾಲಕ ಪ್ರತಿಜ್ಞೆ ಮಾಡಿದ.
“ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…
ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”
ಅಂದಿನಿಂದ ಚಂದ್ರ ಶೇಖರ ತಿವಾರಿ ಎನ್ನುವ ಭೀಮ ಬಲದ ಬಾಲಕ ರಾಷ್ಟ್ರಾರ್ಪಣೆಗೆ ಸಿದ್ಧನಾದ, ಚಂದ್ರ ಶೇಖರ ಆಜಾದ್ ಎಂದು ಪ್ರಸಿದ್ಧನಾದ.
~
ಆಜಾದ್ ತಾನು ಮಾಡಿಕೊಂಡಿದ್ದ ಪ್ರತಿಜ್ಞೆಯನ್ನು ಕೊನೆಯವರೆಗೂ ಪಾಲಿಸಿದ. ಕಾಕೋರಿ ಲೂಟಿ, ಸ್ಯಾಂಡರ್ಸ್ ಹತ್ಯೆ, ಲಾಹೋರ್ ಕಾನ್ಸ್ ಪಿರೆಸಿ ಸೇರಿದಂತೆ ಹತ್ತು ಹಲವು ಆರೋಪಗಳು ಆತನ ಮೇಲಿದ್ದು, ಸದಾ ಗೂಢಚಾರರು ಆತನ ಪ್ರತಿ ನಡೆಯನ್ನು ಹದ್ದಿನ ಕಣ್ಣಲ್ಲಿ ಕಾಯ್ತಿದ್ದರೂ ಆತನ ಕೂದಲು ಕೂಡ ಕೊಂಕಿಸಲಾಗಲಿಲ್ಲ. ಆಜಾದ್ ಹೀಗೆ ಗೂಢಚಾರರಿಗೆ, ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ‘ಆಜಾದ’ನಾಗಿಯೇ ಉಳಿದ ಘಟನೆಗಳಂತೂ ಸ್ವಾರಸ್ಯಕರ.
ಕಾಕೋರಿ ಲೂಟಿಯ ನಂತರ ಕ್ರಾಂತಿ ಕಾರ್ಯದ ಬಹುತೇಕ ಪ್ರಮುಖರು ಸಿಕ್ಕಿಬಿದ್ದರು. ಅವರೆಲ್ಲರಿಗೆ ಮರಣದಂಡನೆಯ ಶಿಕ್ಷೆಯೂ ಆಯ್ತು. ಆದರೆ ಆಜಾದ್ ಮಾತ್ರ ತನ್ನ ಸುಳಿವು ಸಿಗದಂತೆ ವೇಷಮರೆಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ. ಇಂಥದೊಂದು ಸಂದರ್ಭದಲ್ಲಿ ಆಜಾದ್ ಸನ್ಯಾಸಿ ವೇಷ ತೊಟ್ಟು ಹೋಗುತ್ತಿದ್ದ. ಆತನ ಕಟ್ಟುಮಸ್ತಾದ, ಹುರಿಗೊಳಿಸಿದ ದೇಹ ಅಲ್ಲೇ ಗಸ್ತು ತಿರುಗುತ್ತಿದ್ದ ಪೋಲಿಸನಿಗೆ ಅನುಮಾನ ತರಿಸಿತು. ಅವನ ಕಣ್ ಮುಂದೆ ಬಹುಮಾನ, ಭಡ್ತಿಗಳ ದುರಾಸೆ ಸುಳಿದು ನೇರವಾಗಿ ಆಜಾದನ ಹೆಗಲ ಮೇಲೆ ಕೈ ಹಾಕಿ ತಡೆದು ನಿಲ್ಲಿಸಿಬಿಟ್ಟ.
“ಓಯ್ ಬಹುರೂಪಿ! ನೀನು ಆಜಾದ್ ಅನ್ನೋದು ಗೊತ್ತಾಗಿದೆ ನನಗೆ. ನೀನು ಸಿಕ್ಕಿಬಿದ್ದಿರುವೆ. ನಡಿ ಠಾಣೆಗೆ!”
ಸನ್ಯಾಸಿ ಹಿಂತಿರುಗಿ ದುರುಗುಟ್ಟಿದ. ಅವನ ಕಣ್ಣುಗಳು ಕೆಂಡದುಂಡೆಯಾದವು. ಮೈಮೇಲೆ ಆವೇಶ ಬಂದವನ ಹಾಗೆ “ಭಂ ಭಂ ಭೋಲೇ… ಭೋಲೇ ನಾಥ್” ಅನ್ನುತ್ತ ಹೂಂ ಕರಿಸಿದ. “ಸಾಧುವಾದ ತನ್ನನ್ನು ಕೊಲೆಗಟುಕನಿಗೆ ಹೋಲಿಸುತ್ತಿರುವೆಯಾ?” ಎಂದೆಲ್ಲ ಕೂಗಾಡಿ ಶಾಪ ಕೊಡುವವನ ಹಾಗೆ ಕಮಂಡಲುವಿನ ನೀರು ಬಗ್ಗಿಸಿದ. ಅಷ್ಟು ಸಾಕಾಯ್ತು ಪೋಲಿಸನ ನಶೆ ಇಳಿಯಲು. ಆತ ನಿಜವಾದ ಸನ್ಯಾಸಿಯೇ ಅನ್ನುವುದು ಅವನಿಗೆ ಮನವರಿಕೆಯಾಗಿಹೋಯ್ತು. ಕೈಕೈ ಮುಗಿದು ಕಾಲಿಗೆ ಬುದ್ಧಿ ಹೇಳಿದ ಆತ, ಮತ್ತೆ ತಿರುಗಿ ನೋಡಲಿಲ್ಲ!
ನಮ್ಮ ಆಜಾದ್ ಒಳಗೊಳಗೆ ನಗುತ್ತ ಹೊರಗಿನಿಂದ ಸಿಡುಕುತ್ತ ತನ್ನ ಹಾದಿ ನಡೆದ.
ಮತ್ತೊಮ್ಮೆ ಹೀಗಾಯ್ತು. ರಾಜಗುರು, ಸುಖದೇವ್ ಮತ್ತು ಆಜಾದ್ ಹಳ್ಳಿ ಗಮಾರರಂತೆ ವೇಷ ತೊಟ್ಟು ಮಹಾರಾಷ್ಟ್ರದಲ್ಲಿ ಅಡ್ಡಾಡುತ್ತಿದ್ದರು. ರೈಲಿನಲ್ಲಿ ಅವರೊಮ್ಮೆ ಶಿವಾಜಿ ಮಹರಾಜರ ಕೋಟೆಕೊತ್ತಲಗಳ ಅವಶೇಷಗಳಿದ್ದ ಕಣಿವೆಯಲ್ಲಿ ಪ್ರಯಾಣಿಸಬೇಕಾಯ್ತು. ವೀರ ಮರಾಠಾ ರಾಜಗುರು ಶುದ್ಧ ಭಾವುಕ ಮನುಷ್ಯ. ಕಿಟಕಿಯಾಚೆ ಕಾಣುತ್ತಿದ್ದ ಕೋಟೆಗಳನ್ನ ನೋಡುತ್ತಲೇ ಉನ್ಮತ್ತನಾದ. “ಹಾ ಶಿವ್ ಬಾ… ಶಿವಾಜಿ ಮಹರಾಜ್.. ನೀನಿಲ್ಲದಿದ್ದರೆ ಇವತ್ತು ನಮ್ಮ ಗತಿ ಏನಾಗಿರುತ್ತಿತ್ತು.. ” ಎಂದೇನೇನೋ ಪ್ರಲಾಪಕ್ಕೆ ಶುರುವಿಟ್ಟ. ಪಕ್ಕ ಕುಳಿತ ಆಜಾದನ ಕೋಪ ನೆತ್ತಿಗೇರಿತು. ರಾಜ ಗುರುವನ್ನು ತಡೆದು ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸತೊಡಗಿದ. ಅವನ ಗುಣಗಾನ ಮಾಡಿದ ರಾಜಗುರುವನ್ನೂ ಬಯ್ದ. ಮೊದಲು ಕಕ್ಕಾಬಿಕ್ಕಿಯಾದ ರಾಜಗುರುವಿಗೆ ನಂತರ ಪರಿಸ್ಥಿತಿಯ ಅರಿವಾಯ್ತು. ಅದಾಗಲೇ ಆಂಗ್ಲರ ಗುಲಾಮರು ತಮ್ಮ ಗೂಢಚಾರಿಕೆ ಮಾಡುತ್ತಿರುವುದು ಅವನಿಗೂ ಗೊತ್ತಿತ್ತು. ತನ್ನ ಅತಿರೇಕದಿಂದ ಎಲ್ಲರೂ ಸಿಕ್ಕಿಬೀಳುತ್ತಿದ್ದೆವಲ್ಲ ಎಂದು ತುಟಿಕಚ್ಚಿಕೊಂಡ. ಪ್ರಯಾಣ ಮುಗಿದು ಕೆಳಗಿಳಿದನಂತರ ಆಜಾದ್ ರಾಜಗುರುವನ್ನು ಚೆನ್ನಾಗಿ ಬಯ್ದ. ಆತ ಸಮಯ ಪ್ರಜ್ಞೆ ತೋರಿಲ್ಲದಿದ್ದರೆ ಅವರಿಗೆ ಕಂಟಕ ಕಾದಿತ್ತು. ಆಜಾದನಿಗೆ ತಮ್ಮ ಉಳಿವಿಗಾಗಿ ಶಿವಾಜಿ ಮಹರಾಜರನ್ನು ನಿಂದಿಸಬೇಕಾಯ್ತು ಎನ್ನುವುದೇ ನೋವಿನ ಸಂಗತಿಯಾಗಿ ಕಾಡುತಿತ್ತು.
ಆಜಾದ್ ವೇಷ ಮರೆಸಿಕೊಳ್ಳುವುದರಲ್ಲಿ ಅದೆಷ್ಟು ನಿಪುಣನೆಂದರೆ, ಕೆಲವೊಮ್ಮೆ ಅವನ ಸಹಚರರಿಗೂ ಆತನ ಪರಿಚಯ ಸಿಗುತ್ತಿರಲಿಲ್ಲ. ಹೀಗೇ ಒಮ್ಮೆ ಆತ ಹಳ್ಳಿಯೊಂದರಲ್ಲಿ ಹನುಮಾನನ ಗುಡಿಯ ಪೂಜಾರಿಯಾಗಿ ಕೆಲವು ಕಾಲ ತಂಗಿದ್ದ. ಆಗ ಅಂಟಿಕೊಂಡ ‘ಪಂಡಿತ್ ಜೀ’ ಅಭಿದಾನ ಜೀವಮಾನದುದ್ದಕ್ಕೂ ಅವನ ಜೊತೆ ಸಾಗಿತು. ಹೀಗೆ ಆತನ ನೈಜ ಹೆಸರನ್ನೂ, ಪರಿಚಯವನ್ನೂ ಮರೆಸುವಷ್ಟು ಸಹಜವಾಗಿ ಆತ ತಾನು ಹಾಕಿಕೊಂಡ ವೇಷದಲ್ಲಿ ನಟಿಸುತ್ತಿದ್ದ. ಆದರೆ ಆಂತರ್ಯದಲ್ಲಿ ಮಾತ್ರ ತನ್ನ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಪ್ರಜ್ಞೆ ಹೊಂದಿದ್ದು ಅದರ ಕಾಳಜಿ ವಹಿಸುತ್ತಿದ್ದ.
ಒಮ್ಮೆ ಆತ ಮೆಕ್ಯಾನಿಕನಾಗಿ ವೇಷ ಧರಿಸಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಕೆಲಸ ಮಾಡುವಾಗೊಮ್ಮೆ ಆತನ ಕೈಮೂಳೆಗೆ ತೀವ್ರವಾಗಿ ಪೆಟ್ಟಾಯ್ತು. ವೈದ್ಯರು ಆಪರೇಶನ್ ಮಾಡಬೇಕೆಂದರು. ಆಜಾದ್ ತನಗೆ ಅನಸ್ತೇಶಿಯಾ ಕೊಡದೆ ಆಪರೇಶನ್ ಮಾಡಿ ಎಂದು ತಾಕೀತು ಮಾಡಿದ. ಅನಸ್ತೇಶಿಯಾದಿಂದ ಎಚ್ಚರ ತಪ್ಪಿದಾಗ ತಾನು ಸದಾ ಧ್ಯಾನಿಸುವ ಕ್ರಾಂತಿಕಾರ್ಯದ ವಿಷಯಗಳನ್ನು ಕನವರಿಸಿಬಿಟ್ಟರೆ? ತನ್ನ ಕಥೆಯಂತೂ ಮುಗಿಯುವುದು, ಆದರೆ ಇಡಿಯ ಸಂಘಟನೆಯ ರಹಸ್ಯವೂ ಬಯಲಾಬಿಡುವುದಲ್ಲ?
ಆಜಾದ್ ತನ್ನ ಧ್ಯೇಯಕ್ಕಾಗಿ ಆ ನೋವನ್ನು ಕೂಡ ಸಹಿಸಲು ಸಿದ್ಧನಾಗಿದ್ದ. ಆದರೆ ವೈದ್ಯರು ಮಾತು ಮಾತಲ್ಲಿ ಅನಸ್ತೇಶಿಯಾ ಕೊಟ್ಟೇಬಿಟ್ಟರು. ಚಿಕಿತ್ಸೆಯೂ ನಡೆಯಿತು. ಆತನಿಗೆ ಎಚ್ಚರವಾದಾಗ ವೈದ್ಯರು, ‘ಆಜಾದ್’ ಎಂದು ಕರೆದಿದ್ದು ಕೇಳಿ ಗಾಬರಿ! ಅಂದರೆ? ತನ್ನ ಪತ್ತೆಯಾಗಿಬಿಟ್ಟಿದೆ!?
ಆದರೆ ಅಲ್ಲಿ ಆತಂಕಕ್ಕೆ ಆಸ್ಪದವಿರಲಿಲ್ಲ. ಆಜಾದನ ರಾಷ್ಟ್ರಪ್ರೇಮ ವೈದ್ಯರ ಮನಸ್ಸು ತಟ್ಟಿತ್ತು. ಅವರು ಅಲ್ಲಿ ನಡೆದ ಯಾವ ಸಂಗತಿಯನ್ನೂ ಯಾರಿಗೂ ಹೆಳುವುದಿಲ್ಲವೆಂದು ಮಾತುಕೊಟ್ಟ ಬಳಿಕವೇ ಆಜಾದನಿಗೆ ನಿಶ್ಚಿಂತೆ.
ಆಜಾದ್ ಅದೆಷ್ಟು ಎಚ್ಚರಿಕೆಯಿಂದ ಇರುತ್ತಿದ್ದನೆಂದರೆ, ಬಹಳ ವರ್ಷಗಳ ನಂತರ ತಂದೆ ತಾಯಿಯರನ್ನು ಭೇಟಿಯಾಗಲು ಹೋದಾಗ ಕೂಡ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತ ನಿದ್ದೆಯನ್ನು ಕೂಡ ಮಾಡದೆ ತನ್ನನ್ನು ತಾನು ಕಾಯ್ದುಕೊಳ್ಳುತ್ತಿದ್ದ. ಊರಿಗೆ ಬಂದ ಮಗ ಮನೆಗೆ ಬರದೆ ಯಾರದೋ ಮನೆಯಲ್ಲಿರುವನೆಂದು ತಾಯಿಗೆ ಬೇಸರ. ಆದರೆ ದೇಶಕ್ಕಾಗಿ ಆತನನ್ನು ಅವರು ಅದೆಂದೋ ಬಿಟ್ಟುಕೊಟ್ಟಿದ್ದರಲ್ಲವೆ? ಆತ ಬದುಕಿರುವನೆಂಬುದೇ ಅವರ ಪಾಲಿಗೆ ಭಾಗ್ಯವಾಗಿತ್ತು.
ಊರಲ್ಲಿರುವಷ್ಟೂ ದಿನ ನಿದ್ದೆ ಕಳಕೊಂಡಿದ್ದ ಆಜಾದ್ ಕಾಡು ಸೇರಿದಾಗ ಮಾತ್ರ ಗಡದ್ದು ನಿದ್ರೆ ಹೊಡೆಯುತ್ತಿದ್ದ. ಕೇಳಿದರೆ, ‘ಊರಿನ ಮನುಷ್ಯರಿಗಿಂತ ಕಾಡಿನ ಪ್ರಾಣಿಗಳನ್ನು ನಂಬುವುದೇ ಮೇಲು’ ಅನ್ನುತ್ತಿದ್ದ.
ಇಂತಹ ಆಜಾದನನ್ನು ಹಿಡಿಯಲು ಕೊನೆಗೂ ಬಿಳಿಯರಿಗೆ ವಿದ್ರೋಹದ ನೆರವೇ ಬೇಕಾಯ್ತು. ದ್ರೋಹಿಯೊಬ್ಬ ಪಾರ್ಕಿನಲ್ಲಿ ಯಾರನ್ನೋ ಕಾದುಕುಳಿತಿದ್ದ ಆಜಾದನ ಪತ್ತೆ ಪೋಲಿಸರಿಗೆ ನೀಡಿದ. ಅವನನ್ನು ಬಂಧಿಸುವ ಇರಾದೆಯಿಂದ ಬಂದ ಪೋಲಿಸರು ಅವನ ಪಿಸ್ತೂಲಿನ ಉತ್ತರ ಎದುರಿಸಬೇಕಾಯ್ತು. ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ ಕೊನೆಯ ಗುಂಡು ಇರುವ ತನಕವೂ ಕಾದಾಡಿದ ಆಜಾದ್ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಪೋಲಿಸರು ಅವನನ್ನು ಸುತ್ತುಗಟ್ಟಿ ಬಂಧಿಸುವ ಮೊದಲೇ ಕೊನೆಯ ಗುಂಡಿನಿಂದ ತನಗೆ ತಾನೇ ಹೊಡೆದುಕೊಂಡು ಮುಕ್ತನಾದ.
ತನ್ನ ಪ್ರತಿಜ್ಞೆಯಂತೆ, ಸ್ವತಂತ್ರನಾಗಿಯೇ ಬದುಕಿದ್ದ. ಸ್ವತಂತ್ರನಾಗಿಯೇ ಪ್ರಾಣತೆತ್ತ.
~
ಮಾಹಿತಿ ಆಕರ: ಚಕ್ರವರ್ತಿ ಸೂಲಿಬೆಲೆಯವರ ಭಾಷಣ
ಚಿತ್ರ ಕೃಪೆ:indianetzone.com
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರು ಮುಗಿವ ಮುನ್ನವೇ ಎಡಕ್ಕೆ ತಿರುಗಿದರೆ ಟಿಂಬರ್ಯಾರ್ಡ್ ಲೇಔಟ್ ಇದೆ. ನಿರ್ದಾಕ್ಷಿಣ್ಯವಾಗಿ ಕಡಿದು ಉರುಳಿಸಿದ ಬೃಹತ್ ಮರಗಳ ಮಾರಾಟಗಾರರು ಆ ದಾರಿಯುದ್ದಕ್ಕೂ ಇದ್ದಾರೆ. ಆ ಹಾದಿಯ ತುದಿಯಲ್ಲಿನ ಮೋರಿ ಹಾರಿದೊಡನೆ ದೊಡ್ಡ ಗೋಡೌನು ಕಾಣುತ್ತದೆ. ಅದರ ತುಂಬಾ ಕೆಮಿಕಲ್ಗಳ ಅಸಹ್ಯ ವಾಸನೆ. ಅದನ್ನು ಮೀರಿ ಮೆಟ್ಟಿಲು ಹತ್ತುವ ವೇಳೆಗೆ ಮಕ್ಕಳ ಗೌಜು ಗದ್ದಲ ಕೇಳಲಾರಂಭಿಸುತ್ತದೆ. ಒಟ್ಟು ೬೪ ಮಕ್ಕಳು. ಕೊಳಕಿನ ಮುದ್ದೆಯಂತಿರುವ ಪುಟ್ಟ ಅನಾಥ ಮಕ್ಕಳು ಓದುತ್ತಿರುತ್ತಾರೆ, ಆಡುತ್ತಿರುತ್ತಾರೆ ಇಲ್ಲವೇ ಭಜನೆಗೆ ಕುಳಿತಿರುತ್ತಾರೆ.
ಅದು ನರೇಂದ್ರ ನೆಲೆ. ನಾವೆಲ್ಲ, ’ಸ್ಲಮ್ ಏರಿಯಾದವರು’ ಅಂತ ಹೇಳಿ ತುಚ್ಛೀಕರಿಸಿಬಿಡುವ ಮಕ್ಕಳನ್ನು ಒಂದೆಡೆ ಸೇರಿಸಿ ಊಟ- ವಸತಿಯ ವ್ಯವಸ್ಥೆ ಮಾಡಿ ಓದಿಗೂ ಅವಕಾಶ ಕಲ್ಪಿಸುವ ಅಪರೂಪದ ತಾಣ. ಚಿಂದಿ ಆಯುತ್ತ, ಹೀನ ಶಬ್ದಗಳನ್ನಾಡುತ್ತಾ ಕಾಲ ಕಳೆಯಬೇಕಿದ್ದ ವಿನೋದನಂತಹ ಪೋರರು ಅಲ್ಲಿ ವೇದಮಂತ್ರಗಳನ್ನು ಶುದ್ಧವಾಗಿ ಒಪ್ಪಿಸುತ್ತಾರೆ. ದೂರದ ವಿಜಾಪುರದಿಂದ ಬಂದ ಸಂಗಪ್ಪನಂಥವರು ಎಳೆಯ ಕೈಗಳಿಂದ ಬಿಡಿಸಿದ ಬಣ್ಣದ ಚಿತ್ರಗಳನ್ನು ಎದುರಿಗೆ ಹರವುತ್ತಾರೆ. ಸೇವೆಗಿಂತ ಮೊದಲು ಇತರರನ್ನು ಪ್ರೀತಿಸುವುದನ್ನು ಕಲಿ ಎಂಬ ಅಂಬೇಡ್ಕರರ ಮಾತನ್ನು ಮಣಿಕಂಠ ಮುದ್ದುಮುದ್ದಾಗಿ ಹೇಳುತ್ತಾನೆ. ಇಂತಹ ಮಕ್ಕಳಿಗೋಸ್ಕರವೇ ಕಾಲ್ ಸೆಂಟರಿನ ಕೈತುಂಬ ಸಂಬಳದ ಕೆಲಸಕ್ಕೂ ಸಲಾಮು ಹೊಡೆದು ಧಾವಿಸಿರುವ ಡಿಪ್ಲೊಮಾ ಮಾಡಿಕೊಂಡ ರವಿ, ಮಧು ಇವರನ್ನು ಕಂಡಾಗಲಂತೂ ಹೊಸದೊಂದು ಲೋಕಕ್ಕೆ ಹೋದಂತಾಗುತ್ತದೆ.!
’ಬಹುರತ್ನ ಪ್ರಸವೀ ಬಾರತೀ’ ಅಂತ ಹೇಳಿದ್ದೇ ಅದಕ್ಕೆ. ಯುವಶಕ್ತಿ ಹಾಳಾಗಿಯೇ ಹೋಯ್ತು ಎಂದು ಹಲಬುತ್ತಿರುವಾಗಲೇ ಸಾವಿರಾರು ಯುವಕರು ಪಥದರ್ಶಕರಾಗಿ ಬಂದು ಬಿಡುತ್ತಾರೆ. ಅಮೃತತ್ವದ ಬುಡದಲ್ಲಿರೋದು ತ್ಯಾಗ’ ಎಂಬ ಋಷಿವಾಕ್ಯವನ್ನು ಮತ್ತೆಮತ್ತೆ ಸಾಧಿಸಿಬಿಡುತ್ತಾರೆ.
ಇವತ್ತಿನ ಮಟ್ಟಿಗೆ ಸಾವಿರಾರು ಯುವಕಯುವತಿಯರು ಒಂದೇ ಸೂರಿನಡಿ ಕೆಲಸ ಮಾಡುವಲ್ಲಿ ಅಜಿತ್ಜೀಯವರ ಕೈಚಳಕ ಸಾಕಷ್ಟಿದೆ. ಬರೋಬ್ಬರಿ ೨೫ ವರ್ಷಗಳ ಹಿಂದೆ ಅವರೊಂದು ಚೆಂದದ ಕನಸು ಕಟ್ಟಿದ್ದರು. ದೇಶದ ತರುಣರು ಸೇವಾಕಾರ್ಯಕ್ಕೆ ಪಡೆಯಾಗಿ ಬರಬೇಕೆಂಬ ಆಸೆ ಹೊತ್ತಿದ್ದರು. ಅದೇನು ಛಾತಿಯೋ ಏನೋ? ಸೇವೆ ಮಾಡುವ ಇಚ್ಛೆಯುಳ್ಳ ಯುವಕ ಯುವತಿಯರು ಬನ್ನಿ ಎಂಬ ಪ್ರಕಟಣೆ ಕೊಟ್ಟರು. ಉತ್ಸಾಹದಿಂದ ಓಡೋಡಿ ಬಂದವರಿಗೆ ತರಬೇತಿಯೂ ಆಯ್ತು. ಪುರುಷರಿಗೇನೋ ಜವಾಬ್ದಾರಿ ನೀಡಿದ್ದಾಯ್ತು, ಮಹಿಳೆಯರನ್ನು ಕಳಿಸುದೆಲ್ಲಿ? ಅಜಿತ್ಜೀಗೆ ಪರದಾಟ. ಆದರೂ ಧೆsರ್ಯ ತಂದುಕೊಂಡರು. ಹಿಂದೂ ಸೇವಾ ಪ್ರತಿಷ್ಠಾನ ಹುಟ್ಟು ಹಾಕಿದರು. ಹಳ್ಳಿಹಳ್ಳಿಗೆ ಹೋಗಿ ಶಾಲೆ ತೆರೆಯುವ ಸೇವಾಕಾರ್ಯ ಮಾಡುವ ಸಾಹಸಕ್ಕೆ ಕೈಯಿಟ್ಟರು.
ನಾವೆಲ್ಲ ತಿರುಗಾಟಕ್ಕೆಂದು ಹೋಗಲೂ ಹೆದರುವ ಗುಲ್ಬರ್ಗದ ಕುಗ್ರಾಮವೊಂದಕ್ಕೆ ಆಗತಾನೆ ಪ್ರತಿಷ್ಠಾನ ಸೇರಿದ್ದ ಭಗಿನಿಯೊಬ್ಬರು ಹೊರಟು ನಿಂತಿದ್ದರು. ಕುಡುಕರ ತವರೂರಾದ ಆ ಹಳ್ಳಿಯಲ್ಲಿ ಬದುಕು ದುಭರವೆಂಬುದು ಆಕೆಗೂ ಗೊತ್ತಿತ್ತು. ಆದರೆ ತನ್ನ ಸರಳ ನಡೆ, ಮೃದು ಮಾತುಗಳಿಂದ ಜನರ ಮನಸ್ಸನ್ನು ಗೆಲ್ಲುವ ಧೆsರ್ಯ ಆಕೆಗಿತ್ತು. ಬೆಳಗ್ಗೆ ಬೇಗ ಎದ್ದವಳು ಹತ್ತಿರವಿದ್ದವರ ಮನೆಯ ಬಾಗಿಲಿಗೆ ನೀರು ಹಾಕಿ ರಂಗೋಲಿಯಿಡುತ್ತಿದ್ದಳು. ಪೊರಕೆ ಹಿಡಿದು ರಸ್ತೆ ಗುಡಿಸುತ್ತಿದ್ದಳು. ಮಕ್ಕಳನ್ನು ಬರಸೆಳೆದು ಅಪ್ಪಿ ಪಾಠ ಮಾಡುತ್ತಿದ್ದಳು. ನೋಡನೋಡುತ್ತಲೇ ಆ ಊರವರ ಪಾಲಿಗೆ ತಾನೇ ಮಗುವಿನಂತಾಗಿಬಿಟ್ಟಳು. ಆಕೆಯ ಮುಂದೆ ಕುಡಿಯುವುದು, ಬೀಡಿ ಸೇದುವುದು, ಕೊನೆಗೆ ಕೆಟ್ಟ ಮಾತಾಡುವುದೂ ಘೋರ ಪಾಪ ಎಂದು ಜನ ಭಾವಿಸತೊಡಗಿದರು. ಊರು ಬದಲಾಯಿತು. ನಮ್ ಮಗೀಗ ಎಲ್ಲಿಗೂ ಒಯ್ಯಬ್ಯಾಡ್ರಿ ಎಂದು ಜನರೇ ಪ್ರತಿಷ್ಠಾನದವರಿಗೆ ತಾಕೀತು ಮಾಡುವಷ್ಟು!
ಶೋಭಾ ಚಿಪಗೇರಿಯವರು ಸೇವಾ ಭಾರತಿಯಡಿ ಶಾಲೆ ನಡೆಸುತ್ತಿದ್ದಾರೆ. ಆ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು ಅಂಗ ಕಳೆದುಕೊಂಡವರಿಗೆ ಮಾತ್ರ ಸ್ಥಾನ! ಅಲ್ಲಿಗೆ ಹೋಗಿಬಿಟ್ಟರೆ ಕರುಳು ಕಿತ್ತುಬಂದಂತಾಗುತ್ತೆ. ಇಪ್ಪತ್ತು ವರ್ಷ ವಯಸ್ಸಿನವರೂ ಕೂಡ ಬುದ್ಧಿಮಾಂದ್ಯತೆಯಿಂದಾಗಿ ಎರಡನೇ ತರಗತಿಯ ಮಟ್ಟದಲ್ಲಿರುತ್ತಾರೆ. ಅಂಥವರನ್ನು ಸಂಭಾಳಿಸಿ, ಪಾಠ ಮಾಡುವ ಕಾಯಕ ಅದೆಷ್ಟು ಕಷ್ಟದ್ದು ಯೋಚಿಸಿ. ಅದೊಮ್ಮೆ ಆ ಶಾಲೆಯ ಶಿಕ್ಷಕಿಯೊಬ್ಬರು, ಬ್ರಿಟಿಷರು ಭಾರತಕ್ಕೆ ಬಂದು ಲೂಟಿಗೈದ ಕಥೆಯನ್ನು ಮಕ್ಕಳಿಗೆ ಹೇಳಿದ್ದರು. ಅದಾದ ಕೆಲವೇ ತಿಂಗಳಲ್ಲಿ ಯೂರೋಪಿನ ಸೇವಾ ಸಂಸ್ಥೆಯೊಂದು ಶಾಲೆಯ ಪರಿಶೀಲನೆ ನಡೆಸಿ ವ್ಯಾನ್ ಕೊಡಲು ಬಂದಿತ್ತು. ಆ ವಿಷಯ ಗೊತ್ತಾದೊಡನೆ ಬುದ್ಧಿಮಾಂದ್ಯ ಮಗುವೊಂದು ಶಿಕ್ಷಕಿಯನ್ನು ಅಡ್ಡಹಾಕಿ ಪ್ರಶ್ನಿಸಿತು, ನಮ್ಮನ್ನು ಲೂಟಿ ಮಾಡಿದವರ ಬಳಿ ವ್ಯಾನು ಕೇಳುವುದು ಸರಿಯಾ? ಶಿಕ್ಷಕಿಯದು ಉಸಿರು ಕಟ್ಟುವ ಸರದಿ! ಆ ಮಗುವಿಗೆ ತಿಳಿಹೇಳುವಲ್ಲಿ ಆಕೆ ಸುಸ್ತು. ಬುದ್ಧಿಯೇ ಇಲ್ಲವೆನ್ನುವ ಆ ಮಕ್ಕಳಲ್ಲಿ ಚಿಂತನೆಯ ಬುಗ್ಗೆ ಚಿಮ್ಮಿಸಿದ ಆ ಶಿಕ್ಷಕಿಯರದೆಲ್ಲ ಅದೆಂಥ ಅಸೀಮ ಸಂಕಲ್ಪ ನೋಡಿ!
ನಾವು ಎಲ್ಲ ಇದ್ದ ಮಕ್ಕಳಿಗೆ ರ್ಯಾಂಕ್ ಕೊಡಿಸುವ ಶಾಲೆಯ ಎದುರು ನಿಂತು ರೋಮಾಂಚಿತರಾಗುತ್ತೇವೆ. ಈ ಶಾಲೆಗೆ ಹಂಡ್ರೆಡ್ ಪರ್ಸೆಂಟಂತೆ! ಎಂದು ಬೀಗುತ್ತೇವೆ. ಆದರೆ ಯಾರೂ ಇಲ್ಲದ, ಏನೂ ಇಲ್ಲದ ಮಕ್ಕಳಿಗೆ ಬೆಳಕು ತೋರುವ ಈ ಶಾಲೆಗಳ ಬಗ್ಗೆ ಎಂದಾದರೂ ಆಲೋಚಿದ್ದೇವೆಯೇ? ಆ ಶಾಲೆಯ ಕ್ಯಾಂಪಸ್ಸುಗಳಲ್ಲಿ ಅಡ್ಡಾಡಿದ್ದೇವೆಯೇ?
ಕೆಲವರು ಮಾತ್ರ ಅದನ್ನೇ ಬದುಕಾಗಿಸಿಕೊಂಡಿದ್ದಾರೆ. ಅಲಸೂರಿನ ಫಿಲಿಪ್ಸ್ ಟವರ್ ಎದುರಿನ ರಸ್ತೆಯಲ್ಲಿ ’ಮಾರ್ಗದರ್ಶಿ’ ಎಂಬ ಸಂಸ್ಥೆಯೊಂದಿದೆ. ಕೃಷ್ಣಮೂರ್ತಿ ಮತ್ತು ಗೆಳೆಯರು ಸೇರಿ ಕಟ್ಟಿದ್ದರು. ಅಂಗವಿಕಲ ಹೆಣ್ಣು ಮಕ್ಕಳ ಸಾಕುವ ಸಂಸ್ಥೆ ಅದು. ಅಲ್ಲಿ ಮುವ್ವತ್ತೈದು ಜರರಿದ್ದಾರೆ. ಮನೆಯವರಿಗೆ ಹೀನವಾಗಿ, ಅಕ್ಕಪಕ್ಕದವರಿಗೆ ಬೇಡವಾಗಿ ಬದುಕುತ್ತಿದ್ದವರು ಅವರೆಲ್ಲ! ಅಂಥವರಿಗೆ ಊಟ, ವಸತಿ ನೀಡಿ, ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತಿರುವ ಕೃಷ್ಣಮೂರ್ತಿಯವರ ಸಾಧನೆ ಸಾಮಾನ್ಯವಲ್ಲ. ಸಾಧ್ಯವಾದಲ್ಲೆಲ್ಲ ದಾನಿಗಳನ್ನು ಹುಡುಕಿ, ಸಹಾಯ ಕೇಳಿ, ಬಂದ ಹಣದಿಂದ ಸಂಸ್ಥೆ ಬೆಳೆಸಿ ಇತರರಿಗೂ ಸಹಾಯ ಮಾಡುತ್ತಾರಲ್ಲ ಅದೇ ಅದ್ಭುತ.
ಶಿವಕುಮಾರ್ ಹೊಸಮನಿಯದು ಇನ್ನೊಂದು ಥರ. ಅವರು ಇತರರಂತೆ ’ಮರ ಕಡಿಯಬೇಡಿ’ ಎಂದು ಭಾಷಣ ಬಿಗಿದವರಲ್ಲ. ಪೇಪರ್ ಬಳಕೆ ಕಡಿಮೆಯಾದರೆ ಸಾವಿರಾರು ಮರಗಳು ಉಳಿದಂತೆ ಎನ್ನುತ್ತ ಆ ಕೆಲಸಕ್ಕೆ ಕೈ ಹಾಕಿದರು. ಶಾಲೆಗಳಿಗೆ ಹೋಗಿ ವರ್ಷದ ಕೊನೆಯಲ್ಲಿ ಮಕ್ಕಳ ಬಳಿ ಉಳಿಯುವ ಖಾಲಿ ಹಾಳೆಗಳನ್ನು ಸಂಗ್ರಹಿಸಿ ಅದರಿಂದ ನೋಟ್ ಬುಕ್ ತಯಾರಿಸುತ್ತಾರೆ. ಅದನ್ನು ಬಡ ಮಕ್ಕಳಿಗೆ ಉಚಿತವಾಗಿ ಹಂಚಿಬಿಡುತ್ತಾರೆ! ಒಂದು ಕೋಟಿಯಷ್ಟು ಹಾಳೆ ಸಂಗ್ರಹಿಸುವ ಗುರಿ ಇಟ್ಟಿದ್ದಾರೆ. ಲಕ್ಷಾಂತರ ಮಕ್ಕಳಿಗೆ ನೋಟ್ಬುಕ್ ತಲುಪಿಸುವ ಕನಸಿನಲ್ಲಿ ತೇಲುತ್ತಿದ್ದಾರೆ!
ಗುರುತಿದರೆ ಇಂಥವರು ಹತ್ತಾರು ಜನ ನಮ್ಮ ನಡುವೆಯೇ ಸಿಕ್ಕಾರು. ಅವರಿಗೆ ಪ್ರಚಾರ ಬೇಕಿಲ್ಲ. ವೈಭವದ ಬದುಕೂ ಬೇಕಿಲ್ಲ. ಎರಡು ಹೊತ್ತಿನ ಊಟ, ನೆಮ್ಮದಿಯ ಬಾಳು ಅಷ್ಟೇ ಸಾಕು. ಭೂಮಿ ತಾಯಿಯ ಹೊರೆ ಇಳಿದಿರೋದು ಇಂತಹ ಪುಣ್ಯಾತ್ಮರಿಂದಲೇ. ಅವರನ್ನೆಲ್ಲ ಒಮ್ಮೆ ನೋಡಿಬನ್ನಿ. ಅವರು ಮಾಡೋ ಕೆಲಸಗಳತ್ತ ಗಮನಹರಿಸಿ. ಬಯಸಿದ್ದರೆ ನಮ್ಮಂತೆ ಬದುಕಬಹುದಾಗಿದ್ದವರು ಸೇವೆಯ ಯಜ್ಞದಲ್ಲಿ ಸಮಿಧೆsಯಂತೆ ಉರಿಯುವುದೇಕೆ? ಎಂದು ಕೇಳಿಕೊಳ್ಳಿ. ನೀವೂ ಒಂದು ಸಂಕಲ್ಪ ಮಾಡಿ. ಹಣವಿದ್ದರೆ ದಾನ ಮಾಡಿ, ಇಲ್ಲವೇ ರಜಾ ದಿನಗಳಲ್ಲಿ ನಿಮ್ಮ ಸಮಯ ಕೊಡಿ. ಅವಮಾನ ಮಾತ್ರ ಮಾಡಬೇಡಿ. ಸಿರಿವಂತ ಹೆಂಗಸೊಬ್ಬಳು ಅನಾಥ ಹೆಣ್ಣು ಮಕ್ಕಳ ನಿಲಯದ ಮುಖ್ಯಸ್ಥೆಯನ್ನು ಮನೆಗೆ ಕರೆದಿದ್ದರು. ಆಕೆ ಹೋದರೆ ಗೇಟಿನೊಳಕ್ಕೂ ಕರೆಯದೆ ಹರಿದು ಚಿಂದಿಯಾಗಿದ್ದ ಚಪ್ಪಲಿಗಳ ರಾಶಿಯನ್ನು ಗೇಟಿನ ಹೊರಕ್ಕೆ ಎಸೆದಿದ್ದರು. ಸಮಾಜಕ್ಕೆ ಇಂಥ ಸಿರಿವಂತರ ದರ್ದು ಖಂಡಿತ ಇಲ್ಲ. ಬದುಕನ್ನೇ ಸೇವೆಗಾಗಿ ಮುಡಿಪಿಟ್ಟವರ ಜತೆ ಪ್ರೀತಿಯ ನಾಲ್ಕು ಮಾತಾಡಿದರೆ ಸಾಕು, ಅದೇ ಬೆಟ್ಟದಷ್ಟಾಯಿತು. ಹಾಗೆ ಮಾಡಿದ ದಿನ ನಿಮಗೆ ನೆಮ್ಮದಿಯ ನಿದ್ರೆ ಬರದಿದ್ದರೆ ಹೇಳಿ!
~ ಚಕ್ರವರ್ತಿ ಸೂಲಿಬೆಲೆ
ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು.
ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ ಕೆಳ ಟೊಂಗೆಯ ತುದಿಯಲ್ಲೊಂದು ಸೊರಗಿದ ಗಿಳಿ. ಅದಂತೂ ನಿಶ್ಶಕ್ತಿಯಿಂದ ಪೂರಾ ಬಳಲಿಹೋಗಿತ್ತು. ಆದರೂ ಏನೋ ಧ್ಯಾನಿಸುತ್ತ ಕುಳಿತಿದ್ದ ಅದರ ಮುಖದಲ್ಲಿ ತೇಜಸ್ಸು ಹೊಮ್ಮುತ್ತಿತ್ತು.
ದೇವೇಂದ್ರ ಒಣಗಿದ ಮರದಲ್ಲಿ ಕುಳಿತು ಈ ಗಿಳಿ ಏನು ಮಾಡುತ್ತಿದೆ? ಎಂದು ಅಚ್ಚರಿಪಟ್ಟ. ಅದನ್ನು ಕುರಿತು ಮಾತನಾಡಿಸಿದ.
“ಶುಕ ರಾಜ, ಸತ್ತುಹೋಗಿರುವ ಈ ಮರದಲ್ಲಿ ಇನ್ನೂ ಯಾಕೆ ನೆಲೆಸಿದ್ದೀ? ಹಣ್ಣು ಹಂಪಲುಗಳಿಲ್ಲದ ನೀನು ಅದೆಷ್ಟು ಕೃಶವಾಗಿ ಹೋಗಿದ್ದೀ ನೋಡಿಕೊಳ್ಳಬಾರದೆ? ಮತ್ತೆರಡು ದಿನ ನೀನು ಇಲ್ಲೇ ನಿಂತೀಯಾದರೆ ಖಂಡಿತ ಜೀವ ಕಳೆದುಕೊಳ್ಳುವೆ. ಹೋಗು. ಯಾವುದಾದರೂ ಸಂಪದ್ಭರಿತ ಮರಕ್ಕೆ ಹೋಗು. ಬೇಕಾದಲ್ಲಿ ನನ್ನ ಭಟರು ನಿನಗೆ ಸಹಾಯ ಮಾಡುವರು” ಎಂದು ತಿಳಿ ಹೇಳಿದ.
ದೇವ ರಾಜನ ಮಾತಿಗೆ ಗಿಳಿ ಕಣ್ತೆರೆಯಿತು. ಆ ಮಾತುಗಳಿಂದ ಅದು ವಿಸ್ಮಯಗೊಂಡಿತ್ತು. ವಿನಮ್ರವಾಗಿ ನಮಸ್ಕರಿಸುತ್ತ ಅದು ತನ್ನ ವೃತ್ತಾಂತವನ್ನು ತಿಳಿಸಿತು.
“ ದೇವತೋತ್ತಮ, ನಾನು ಕುಳಿತಿರುವ ಈ ವೃಕ್ಷ ಸಾಮಾನ್ಯವಾದುದಲ್ಲ. ಇದು ಕಲ್ಪ ವೃಕ್ಷ. ನನ್ನ ಪೂರ್ವಜರು ಇಲ್ಲಿಯೇ ಜನಿಸಿ, ಇಲ್ಲಿಯೇ ನೆಲೆ ನಿಂತರು. ಲೆಕ್ಕಕ್ಕೆ ಸಿಗದಷ್ಟು ತಲೆಮಾರುಗಳಿಂದ ನನ್ನ ವಂಶಸ್ಥರು ಇಲ್ಲಿ ಆಗಿ ಹೋಗಿದ್ದಾರೆ. ನಾನೂ ಇಲ್ಲಿಯೇ ಹುಟ್ಟಿದೆ, ಇಲ್ಲಿಯೇ ಈ ಮರದ ಸ್ವಾದಿಷ್ಟ ಫಲಗಳನ್ನು ಉಣ್ಣುತ್ತ, ದಟ್ಟ ಎಲೆಗಳ ತಣ್ಣನೆಯ ಆಸರೆಯಲ್ಲಿ ಬೆಳೆದೆ. ಆದರೆ, ವಿಧಿ ನಿಯಮದಂತೆ ಒಂದು ಕಲ್ಪದ ವರೆಗೆ ಬದುಕಿದ್ದ ಈ ವೃಕ್ಷವು ನಿಯಮಿತ ಅವಧಿ ಮುಗಿಸಿ ಜೀವ ತೊರೆಯಿತು.
ಆದರೇನು? ಈ ವೃಕ್ಷವು ಹೂ ಹಣ್ಣೂಗಳನ್ನು ಕೊಡುವಾಗ ನಾನು ಇಲ್ಲಿಯೇ ಇದ್ದೆನಲ್ಲವೇ? ಈಗ ಅದು ಒಣಗಿಹೋಗಿದೆ ಎಂದಾದಾಗ ಬಿಟ್ಟುಹೋಗುವುದು ಕೃತಘ್ನತೆಯಾಗುವುದಿಲ್ಲವೇ?”
ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು. ಅವನು ಮತ್ತೆ ತಿಳಿಹೇಳಿದ,
“ ಖಗೋತ್ತಮ, ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ. ಆದರೂ ಹೇಳುತ್ತಿದ್ದೇನೆ ಕೇಳು: ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ- ಹಣ್ಣುಗಳನ್ನು ನೀಡದೆ ಇರುವ ಮೂಲಕ) ಬಿಟ್ಟುಕೊಟ್ಟಿದೆ. ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ”
ದೇವೇಂದ್ರ ಹೆಳಿದಂತೆ, ಗಿಳಿ ನಿಜಕ್ಕೂ ಮೇಧಾವಿ.
“ದೇವ ರಾಜ, ಖಗ- ಮೃಗಗಳು ಚಲನಶೀಲ ಚೈತನ್ಯವನ್ನು ಹೊಂದಿರುತ್ತವೆ. ನಾವು ಕಾಲ ಧರ್ಮಕ್ಕೆ ಒಳಗಾದರೂ ನಮ್ಮ ಸ್ವಭಾವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೇವೆ. ಆದರೆ ವೃಕ್ಶಗಳು ಜಡ ಚೈತನ್ಯಶಾಲಿಗಳು. ಅವುಗಳಿಗೆ ಕಾಲಧರ್ಮಕ್ಕೆ ತಲೆಬಾಗುವ ವಿನಃ ಅನ್ಯ ಮಾರ್ಗವಿಲ್ಲ. ಹೀಗಗಿ ಅವು ತಮ್ಮ ಸ್ವಧರ್ಮವನ್ನೂ ಸ್ವಭಾವವನ್ನೂ ತ್ಯಜಿಸಬೇಕಾಗುತ್ತದೆ. ಇಷ್ಟಕ್ಕೂ ಚೈತನ್ಯ ಕಳೆದುಕೊಂಡಿರುವ ವೃಕ್ಷದ ಧರ್ಮ ಕಳೆದಿದೆ ಎಂದ ಮಾತ್ರಕ್ಕೆ ಇನ್ನೂ ಸಚೇತನನಾಗಿರುವ ನಾನು ಸ್ವಭಾವ ಕಳೆದುಕೊಳ್ಳುವುದು ಹೇಗೆ ಸೂಕ್ತವಾದೀತು? ಇಷ್ಟಕ್ಕೂ, ನಿನಗೆ ತಿಳಿಯದ ಸಂಗತಿ ಯಾವುದಿದೆ ಹೇಳು?” ಎಂದು ಮಾರ್ನುಡಿದು ಇಂದ್ರನ ಮೆಚ್ಚುಗೆಗೆ ಪಾತ್ರವಾಯಿತು.
ಶುಕರಾಜನ ಮಾತಿಗೆ ತಲೆದೂಗಿದ ದೇವ ರಜ ಕೇಳ್ದಿಅ, “ನಿನಗೆ ಈ ಎಲ್ಲ ಸಂಗತಿ ಹೇಗೆ ತಿಳಿಯಿತು? ನೀನು ಹೇಗೆ ಈ ಜ್ಞಾನವನ್ನು ಪಡೆದುಕೊಂಡೆ?”
ಗಿಳಿ ಹೇಳಿತು, ” ನಾನು ಎಂದೂ ಸುಳ್ಳನ್ನಾಡಲಿಲ್ಲ. ಇತರರ ಆಹಾರ ಕಸಿದುಕೊಳ್ಳಲಿಲ್ಲ. ಮಿತ್ರ ದ್ರೋಹ ಮಾಡಲಿಲ್ಲ. ಎಂದೂ ಯಾರನ್ನೂ ಅವಮಾನಿಸಲಿಲ್ಲ. ಈ ಕಾರಣದಿಂದಲೇ ನನಗೆ ಸಹಜವಾದ ನಿರ್ಮಲ ಜ್ಞಾನ ದೊರಕಿದೆಯೆಂದುಕೊಳ್ಳುವೆ”
ಗಿಳಿಯ ವಿನಯವಂತಿಕೆ ಮತ್ತು ಸಚ್ಚರಿತ್ರೆಯಿಂದ ಪ್ರಭಾವಿತನಾದ ದೇವೇಂದ್ರ, ಏನಾದರೊಂದು ವರ ಕೇಳುವಂತೆ ಹೇಳಿದ. ಸ್ವರ್ಗ ಲೋಕದಲ್ಲಿ ಸ್ಥನ ಕೊಡುವೆನೆಂದ. ಅದನ್ನು ನಿರಾಕರಿಸಿದ ಗಿಳಿ, ತನಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಲ್ಪವೃಕ್ಷದ ಪುನರುಜ್ಜೀವನವನ್ನೇ ಬಯಸಿತು. ಇಂದ್ರ ‘ತಥಾಸ್ತು’ ಎನ್ನುತ್ತಾ, ಕಲ್ಪ ವೃಕ್ಷಕ್ಕೆ ಜೀವದಾನ ಮಾಡಿದ.
* * *
ಬಹುಶಃ ನೀವು ಕೆಳಬಹುದು. ಈ ಕಥೆ ಏನು ಹೇಳುತ್ತದೆ? ಎಂದು. ಅದಕ್ಕಿಂತಲೂ, ಇಂಥ ಕಥೆಗಳಿಂದ ಏನು ಪ್ರಯೋಜನ? ಎಂದು.
ಮೊದಲಿಗೆ ಇಲ್ಲಿ “ಜನನೀ ಜನ್ಮ ಭೂಮಿಶ್ಚ….” ಅನ್ನುವ ಭಾವ ಎದ್ದು ಕಾಣುವುದನ್ನ ಧಾರಾಳವಾಗಿ ಗುರುತಿಸಬಹುದು.
ಎರಡನೆಯದಾಗಿ ಗಿಳಿ ನಿರ್ಮಲ ಜ್ಞಾನವನ್ನು ಹೊಂದಿದ ಬಗೆ. ಅದರ ನಡವಳಿಕೆ ನಮಗೆ ಮಾದರಿ. ಬರಿಯ ಓದು- ವಿದ್ಯೆ, ಜ್ಞಾನವಾಗುವುದಿಲ್ಲವಲ್ಲ!?
ಮೂರನೆಯದಾಗಿ ಅಥವಾ ಮೊತ್ತ ಮೊದಲನೆಯದಾಗಿ ನಾವು ಈ ಕಥೆಯನ್ನು ಹೆಣೆದ ನಮ್ಮ ಪೂರ್ವಜರ ಜ್ಞಾನ ಭಂಡಾರದ ವ್ಯಾಪ್ತಿಯನ್ನು ತಿಳಿಯಬಹುದು. ಜಡತೆ, ಚಲನಶೀಲತೆ, ಚೈತನ್ಯಗಳ ವಿಶ್ಲೇಷಣೆ ಅವರ ಜೀವ ಭೌತಿಕ ಶಾಸ್ತ್ರದ ಅರಿವನ್ನು ಹೇಳುತ್ತದೆ. ‘ಕಲ್ಪ’ದ ಉಲ್ಲೇಖ, ಅವರ ಕಾಲ ಜ್ಞಾನದ ಬಗ್ಗೆ ಮಾಹಿತಿ ನೀಡುತ್ತದೆ.
ಪಠ್ಯಗಳಲ್ಲಿ ಅರವತ್ತು ಸೆಕೆಂಡಿಗೆ ಒಂದು ನಿಮಿಷ, ಗಂಟೆಗೆ ಅರವತ್ತು ನಿಮಿಷ, ಇಪ್ಪತ್ನಾಲ್ಕು ಗಂಟೆಗೆ ದಿನ, ಮುನ್ನೂರರವತ್ತೈದು ದಿನಕ್ಕೆ ವರ್ಷ… ಎಲ್ಲ ಓದಿಕೊಂಡಿದ್ದೇವೆ. ಆಮೇಲೆ?
ಮನೆಯಲ್ಲಿ ಅಪ್ಪ ಅಮ್ಮನಿಂದ ಒಂದಷ್ಟು ಕಲಿತವರಿಗೆ ಅರವತ್ತು ವರ್ಷ ಸೇರಿ ಒಂದು ಸಂವತ್ಸರ ಅನ್ನುವ ವರೆಗೆ ಗೊತ್ತಿರುತ್ತದೆ ಸದ್ಯ! ಆಮೇಲೆ?
ಅದನ್ನ ಪದವಿ ನಂತರ ವಿಶೇಷವಾಗಿ ಅಧ್ಯಯನ ಮಾಡಬಹುದು ಎಂದೇನೋ ನೀವು ಹೇಳಬಹುದು. ಅಲ್ಲಿ ಕೊಡಮಾಡುವ ಕಬ್ಬಿಣದ ಕಡಲೆಗಳನ್ನು ಜಗಿಯುತ್ತ ಅರಗದೆ ಹೋಗಬಹುದು. ಎಲ್ಲೋ ಕೆಲವರಿಗೆ ಸಿದ್ಧಿ ದಕ್ಕಿದರೂ ದಕ್ಕಬಹುದು!
ಇರಲಿ. ಸಧ್ಯಕ್ಕೆ, ನಮ್ಮ ಪೂರ್ವಜರು ಲೆಕ್ಕ ಹಾಕಿಟ್ಟ ಕಾಲ ಗಣನೆಯ ವಿಧಾನವನ್ನು ಇಲ್ಲಿ ಕೊಡುತ್ತಿದ್ದೇನೆ. ಇದನ್ನೂ ಈಗ ಮೂರು- ನಾಲ್ಕು ದಶಕಗಳಿಂದ ವಿಜ್ಞಾನಿಗಳು ಗಂಭೀರವಾಘಿ ಅಧ್ಯಯನ ನಡೆಸಿ ಅತ್ಯಂತ ವೈಜ್ಞಾನಿಕವೆಂದು ಘೋಶಿಸಿದ್ದಾರೆ. ನಮ್ಮ ಋಷಿಪರಂಪರೆಯ ಜ್ಞಾನಕ್ಕೆ ಬಾಗಿ ಶರಣೆಂದಿದ್ದಾರೆ, ತಾವೂ ಈ ನಿಧಿಯಿಂದ ಅಗತ್ಯ ಮಾಹಿತಿಗಳನ್ನು ಬಳಸಿ ಸಂಶೋಧನೆ ನಡೆಸುತ್ತಿದ್ದಾರೆ.
ಈ ಮುವ್ವತ್ತು- ನಲ್ವತ್ತು ವರ್ಷಗಳಿಂದಲೇ ಯಾಕೆ?
ಯಾಕೆಂದರೆ ಅರವತ್ತು ವರ್ಷಗಳ ಮುನ್ನ ನಾವು ಗುಲಾಮರಾಗಿದ್ದೆವು. ನಮ್ಮ ಯಾವ ಮಾತಿಗೂ ಗೌರವ- ಮನ್ನಣೆ ಸಿಗುತ್ತಿರಲಿಲ್ಲ. ನಾವು ಸ್ವತಂತ್ರರಾಗಿ, ಅದನ್ನು ಉಳಿಸಿಕೊಳ್ಳುವ ತಾಕತ್ತು ತೋರಿದ ನಂತರವಷ್ಟೇ ನಮಗೆ ಜಗತ್ತಿನಲ್ಲಿ ಮತ್ತೆ ಜಾಗ ಸಿಕ್ಕಿದ್ದು. ಇಂಥ ಗೌರವ ಗಳಿಸಿಕೊಟ್ಟವರು, ಮತ್ತದೇ, “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದುಕೊಂಡು ಅದಕ್ಕಾಗಿ ಪ್ರಾಣ ತೆತ್ತ, ಹೋರಾಡಿದ ಮಹಾತ್ಮರು.
ಅದನ್ನು ಬೇರೊಂದು ಶಿರೋನಾಮೆಯಡಿಯಲ್ಲಿ ಚರ್ಚಿಸೋಣ. ಸಧ್ಯಕ್ಕೆ, ವೇದಗಳಲ್ಲಿ ಉಲ್ಲೇಖವಾಗಿರುವಂತೆ ಕಾಲ ಗಣನೆ ಮಾಪನಗಳನ್ನು ಇಲ್ಲಿ ನೀಡಿದ್ದೇವೆ, ಗಮನಿಸಿ.
* * *
ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆದು ಅದರಿಂದ ದೀರ್ಘಕಾಲಗಳ ಮಾಪನೆ ಮಾಡುತ್ತಿದ್ದ ಬೆಳವಣಿಗೆ ಬೆರಗುಮೂಡಿಸುತ್ತದೆ.
ಕಮಲದ ಎಸಳನ್ನು ರಂಧ್ರ ಮಾಡಲು
ಅಗತ್ಯವಾಗುವ ಸಮಯ = ೧ ತ್ರುಟಿ
೧೦೦ ತ್ರುಟಿಗಳು = ೧ಲವ
೧೦೦ ಲವಗಳು = ೧ನಿಮೆಷ (ಕಣ್ಣು ಮಿಟಿಕಿಸುವಷ್ಟು ಸಮಯ)
೪ ೧/೨ ನಿಮೆಷ = ೧ ದೀರ್ಘ ಅಕ್ಷರ ಉಚ್ಚರಣಾ ಸಮಯ
೪ ದೀರ್ಘ ಅಕ್ಷರ = ೧ ಕಾಷ್ಠ
೨ ೧/೨ ಕಾಷ್ಠಗಳು = ೧ ವಿಘಟಿಕ
೬೦ ವಿಘಟಿಕಗಳು = ೧ ಘಟಿಕಾ (ಈಗಿನ ೨೪ ನಿಮಿಷಗಳು)
೬೦ ಘಟಿಕಾಗಳು = ೧ ದಿನ
೩೦ ದಿನಗಳು = ೧ ಮಾಸ
೧೨ ಮಾಸಗಳು = ೧ ವರ್ಷ
೪೩,೨೦,೦೦೦ ವರ್ಷಗಳು = ೧ ಯುಗ
೭೨ ಯುಗಗಳು = ೧ ಮನ್ವಂತರ
೧೪ ಮನ್ವಂತರಗಳು = ೧ ಕಲ್ಪ
೨ ಕಲ್ಪಗಳು = ಬ್ರಹ್ಮನ ಒಂದು ದಿನ (ಹಗಲು – ರಾತ್ರಿಗಳು)
ಬ್ರಹ್ಮನ ೩೦ ದಿನಗಳು = ಬ್ರಹ್ಮನ ಒಂದು ತಿಂಗಳು
ಬ್ರಹ್ಮನ ೧೨ ತಿಂಗಳುಗಳು = ಬ್ರಹ್ಮನ ಒಂದು ವರ್ಷ
ಬ್ರಹ್ಮನ ೧ ವರ್ಷ = ೭೨೧೪೨೩೦೧೨ ಯುಗ
೭,೨೫,೭೬೦ ಯುಗಗಳು
ಬ್ರಹ್ಮನ ೧೦೦ ವರ್ಷ = ಒಂದು ಮಹಾಕಲ್ಪ ಅಥವಾ ಬ್ರಹ್ಮನ ಆಯುಷ್ಯ
ಅವರು ಹುಟ್ಟಿದ ಸಂದರ್ಭದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದರು. ಅವರಪ್ಪ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಮನೆ ಇದ್ದುದು ರಾಮನಗರದಲ್ಲಿ. ಮಳೆ- ನೆರೆಯ ಕಾರಣದಿಂದ ಗಾಂಧೀಜಿ ಅಲ್ಲೇ ಒಂದು ರಾತ್ರಿಯ ಮಟ್ಟಿಗೆ ತಂಗಬೇಕಾಗಿ ಬಂತು. ಆಗ ಆ ಶಿಶುವಿನ ತಂದೆಗೆ ಗಾಂಧೀಜಿಯವರೊಡನಾಡುವ ಸೌಭಾಗ್ಯ!
ಮಾರನೇ ಬೆಳಗ್ಗೆ ಹೀಗಾಯ್ತು. ರಾಷ್ಟ್ರಪಿತ ಸ್ನಾನಕ್ಕೆಂದು ಹೊಳೆಯತ್ತ ನಡೆದರು. ತಮ್ಮ ಬಟ್ಟೆ (ಬಟ್ಟೆ ಏನು? ತುಂಡು ಪಂಚೆ!) ತಾವೆ ಒಗೆದುಕೊಂದರು. ಈ ತಂದೆ ಆ ಬಟ್ಟೆಯನ್ನು ತಾವೇ ಹಿಡಿದುಕೊಂಡರು. ಮುಂದೆ ಮುಂದೆ ಗಾಂಧೀ, ಹಿಂದೆಹಿಂದೆ ಈತ. ನಡುವೆಯೆಲ್ಲೋ ಕೆಲ ನಿಮಿಷ ಅವರ ಪತ್ತೆಯಿಲ್ಲ. ಎಲ್ಲಿ ಹೋಗಿದ್ದರು!?
ಅವತ್ತಿನ ಸಂಜೆ ಲೋಕಾಭಿರಾಮದಲ್ಲಿ ಮಹಾತ್ಮಾ ಆತನನ್ನು ಕೇಳಿದರು, “ಬೆಳಗ್ಗೆ ನದಿಯಿಂದ ಬರುವಾಗ ನೀವು ಎಲ್ಲಿ ಮಾಯವಾಗಿಬಿಟ್ಟಿದ್ದಿರಿ!?
ಆತ ಸಂಕೋಚದಿಂದ ನುಡಿದರು. “ನನಗೆ ಕಳೆದ ವಾರವಷ್ಟೇ ಗಂಡು ಮಗು ಹುಟ್ಟಿದೆ. ನಿಮ್ಮ ಬಟ್ಟೆಯಿಂದ ಜಿನುಗುತ್ತಿದ್ದ ಪವಿತ್ರ ಜಲವನ್ನ ಅವನಿಗೆ ಚಿಮುಕಿಸಿ ಪವಿತ್ರಗೊಳಿಸೋಣವೆಂದು ಮನೆಗೆ ಹೋಗಿದ್ದೆ. ಹೆಂದತಿ ಮಗುವಿಗೆ ನೀರು ಸೋಕಿ ಶೀತವಾಗುತ್ತದೆಂದು ಗೊಣಗಿದಳು. ಆದರೆ ನಿಮ್ಮ ಮೈ ಸೋಕಿದ ಬಟ್ಟೆಯ ನೀರು ನನಗೆ ಪರಮ ಪವಿತ್ರ!”
ಗಾಂಧೀಜಿ ಅವರ ಅಭಿಮಾನಕ್ಕೆ ಸೋತರು. ಆದರೂ, ತಮ್ಮಿಂದಾಗಿ ಆ ಮಗುವಿಗೇನಾದರೂ ಶೀತಬಾಧೆಯಾದರೆ ತಮಗೆ ಪಾಪ ತಟ್ಟುತ್ತದಲ್ಲವೇ? ಎಂದು ಅವರನ್ನು ಪ್ರಶ್ನಿಸಿದರು. ಕೊನೆಗೆ ತಾವೇ ನೂತ ನೂಲಿನಿಂದ ಮಾಡಿದ ಕೆಲವು ಬಟ್ಟೆಚೂರುಗಳನ್ನು ಅವರ ಕೈಲಿಟ್ಟು ಹರಸಿದರು.
ಆ ಶಿಶು ಮುಂದೊಮ್ಮೆ ತನ್ನ ರಾಷ್ಟ್ರಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡುವುದಿತ್ತು. ಅದರ ಮುನ್ಸೂಚನೆಯೋ ಎನ್ನುವಂತೆ ರಾಷ್ಟ್ರಪಿತನ ಆಶೀರ್ವಾದ ಅದಕ್ಕೆ ದಕ್ಕಿತ್ತು. ಸ್ವಾಭೀಮಾನ, ದೇಶಾಭಿಮಾನಗಳನ್ನು ಮೈಮನಗಳ ತುಂಬ ಹೊತ್ತಿದ್ದ ಅದು ಮುಂದೆ ದೇಶ ಕಾಯುವ ಸೈನಿಕನಾಗಿ ರೂಪುಗೊಂಡಿತು…
~
ಹೌದು. ಇದು ಸತ್ಯ ಸಂಗತಿ. ಇಂಥ ಘಟನೆಗಳು ಅದೆಷ್ಟೋ ಇವೆ ನಿಜ. ಪ್ರಸ್ತುತ ಇಲ್ಲಿ ಹೇಳಿದ ಸಂಗತಿಯನ್ನ ನೇರಾನೇರ ಪ್ರಮುಖ ಪಾತ್ರಧಾರಿಯ ಬಾಯಿಂದಲೇ ಕೇಳುವಾಗ ಆಗಿದ್ದ ರೋಮಾಂಚನವಿದೆಯಲ್ಲ, ಅದು ನಮಗೆ ವಿಶಿಷ್ಟ ಅನುಭವ ನೀಡಿತು.
ಅವರು, ಲೆಫ್ಟಿನೆಂಟ್ ಕರ್ನಲ್ ಹರದೇವ್ ಕಾಟ್ಕರ್. ಅವರೇ ಗಾಂಧೀಜಿಯವರಿಂದ ಸ್ವಾಭಿಮಾನದ ಪ್ರತೀಕವಾದ ಖಾದಿ ಬಟ್ಟೆಯ ಉಡುಗೊರೆ ಪಡೆದ ಧನ್ಯ ಶಿಶು. ಸೈನಿಕ ವೃತ್ತಿಯ ಹಿನ್ನೆಲೆಯ ವಂಶಸ್ಥರಾಗಿದ್ದ ಅವರಿಗೆ ಅದೇನೂ ಯಾಂತ್ರಿಕ ದುಡಿಮೆಯಾಗಿರಲಿಲ್ಲ. ಅವರು ಸಂಪೂರ್ಣವಾಗಿ ತಮ್ಮನ್ನು ಮಾತೃಭೂಮಿಗೆ ಸಮರ್ಪಿಸಿಕೊಂಡಿದ್ದರು. ಭಾರತದ ಮೇಲಿನ ಅವರ ಅಭಿಮಾನ ಅವರ ಪ್ರತಿ ಮಾತಿನಲ್ಲೂ ಎದ್ದು ತೋರುತ್ತದೆ. ಎಂಭತ್ತೊಂದರ ಈ ಇಳಿ ವಯಸ್ಸಿನಲ್ಲೂ ಅವರು ಭಾರತದ ಬಗ್ಗೆ, ಯುದ್ಧಗಳ ಬಗ್ಗೆ ಗಂಟೆಗಟ್ಟಲೆ ಹರಟಬಲ್ಲರು. ಆದರೆ ಕೇಳುವ ನಾವು ಸೂಕ್ತ ಪ್ರಶ್ನೆಗಳನ್ನು ತಯಾರಿಟ್ಟುಕೊಂಡಿರಬೇಕಷ್ಟೆ.
ಹರದೇವ್ ಕಾಟ್ಕರ್ ಅವರು ಚೀನಾ ಯುದ್ಧದಲ್ಲಿ ಒಂದಿಡೀ ಪ್ಲಟೂನ್ ಅನ್ನು ಸಮರ್ಥವಾಗಿ ಮುನ್ನಡೆಸಿದ ನಮ್ಮ ಹೆಮ್ಮೆಯ ಕನ್ನಡಿಗ. ಯುದ್ಧದ ಅವರ ಒಂದೊಂದು ಅನುಭವವೂ ರೋಮಾಂಚಕಾರಿ. ತಮ್ಮ ಅಂದಿನ ದಿನಗಳ ಸಾಥಿಗಳನ್ನು ಅವರು ಇಂದಿಗೂ ಮರೆತಿಲ್ಲ. ಯುದ್ಧದಲ್ಲಿ ಹೊಟ್ಟೆಗೆ ಗುಂಡುಹೊಕ್ಕು ಕರುಳು ಸುಟ್ಟು ಹೋಗಿ ಡಾಕ್ಟರು ಅವರು ಬದುಕುವುದಿಲ್ಲವೆಂದುಬಿಟ್ಟಿದ್ದರಂತೆ! ಅವರು ಹಾಗೆ ಹೇಳಿ ಮೂವತ್ತೈದು ವರ್ಷಗಳು ಸಂದಿವೆ!! ನಮ್ಮ ವೀರಯೋಧ ವಯಸ್ಸಿನ ಕೆಲವು ಸೈಡ್ ಎಫೆಕ್ಟ್ ಗಳನ್ನು ಬಿಟ್ಟರೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ಅವರ ಹೊಟ್ಟೆಯ ಅರ್ಧ ಭಾಗ ಬರೀ ಕೃತಕ ಅಂಗಾಂಗಗಳಿಂದಲೇ ಕೂಡಿದೆ. ಆದರೂ ಅವರು ಯಾಅ ಕಾಯಿಲೆಯ ನೆಪ ಹೇಳದೆ ಇಂದಿಗೂ ತಮ್ಮ ಶಿಸ್ತಿನ ಜೀವನಕ್ಕೆ ಬದ್ಧರಾಗಿದ್ದಾರೆ.
ಕಾಟ್ಕರ್ ಅವರನ್ನು ನಾವು ಭೇಟಿಯಾಗಿದ್ದು- ಮೊನ್ನೆ ನಡೆಯಿತಲ್ಲ, ರ್ಆ.ಶ.ಕೇಂದ್ರದ ಯುವ ಜಾಗೃತಿ ಶಿಬಿರ… ಆ ಸಂದರ್ಭದಲ್ಲಿ. ಶಿಬಿರದ ಮುಖ್ಯ ಅಂಗವಾಗಿ ‘ಸೈನಿಕನೊಡನೆ ಒಂದು ಗಂಟೆ’ ಸಂವಾದ ಏರ್ಪಡಿಸಲಾಗಿತ್ತು. ಯುವಕರನ್ನು ಕಂಡು ಸಂತೋಷದಿಂದ ಉಬ್ಬಿಹೋದ ಕಾಟ್ಕರ್, ತಮ್ಮ ಉಸಿರಾಟದ ತೊಂದರೆಯನ್ನೂ ಮರೆತು ಎಡೆಬಿಡದೆ ಸುರಿಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಕುಳಿತಿದ್ದರು. ಯುವಕರೂ ಕೂಡ ಕಾಲದ ಅರಿವಿಲ್ಲದೆ, ಹೊಟೆ ಹಸಿವನ್ನೂ ಮರೆತು ಅವರೊಂದಿಗೆ ಮಾತುಕಥೆಯಲ್ಲಿ ಲೀನವಾಗಿ ಹೋಗಿದ್ದರು. ಮುಂದಿನ ಅವಧಿಯಲ್ಲಿ ಗಣೇಶ್ ದೇಸಾಯಿಯವರ ರಾಷ್ಟ್ರಭಕ್ತಿ ಗೀತ ಕಾರ್ಯಕ್ರಮವಿಲ್ಲದಿದ್ದರೆ ಬಹುಶಃ ಈ ಸಂವಾದವನ್ನು ಮಧ್ಯೆ ತುಂಡರಿಸುತ್ತಿರಲಿಲ್ಲವೇನೋ!?
ಯುವಕರಿಗಿರಲಿ, ಸ್ವತಃ ಕಾಟ್ಕರರಿಗೂ ಸಂವಾದ ಮುಗಿದದ್ದು ಬೇಸರವಾದಂತೆ ತೋರುತ್ತಿತ್ತು. ಅವರು ಇನ್ನಷ್ಟು, ಮತ್ತಷ್ಟು ಹೇಳುವ ಹುರುಪಿನಲ್ಲಿದ್ದರು. “ಛೆ! ನನ್ನ ಯೂನಿಫಾರಮ್ಮು, ಮೆಡಲುಗಳನ್ನು ನಿಮಗೆ ತೋರಿಸಲು ತರಬೇಕಿತ್ತು, ಇಷ್ಟು ಆಸಕ್ತ ಹುಡುಗರಿದ್ದೀರೆಂಬ ಕಲ್ಪನೆಯೂ ನನಗಿರಲಿಲ್ಲ!” ಎಂದು ಮತ್ತೆಮತ್ತೆ ಪೇಚಾಡಿಕೊಂಡರು.
ಶ್ರೀಯುತ ಕಾಟ್ಕರರು ಬರಹಗಾರರೂ ಹೌದು. ಇವರು ಬರೆದಿರುವ ‘ವಿಶ್ವ ಭರತಿ’ ಕೃತಿ ಇನ್ನೂ ಮುದ್ರಣ ಕಾಣಬೇಕಿದೆ. ಆರಂಭದಲ್ಲಿ ಇವರು ಶಿಕ್ಷಕ ವೃತ್ತಿಯನ್ನಾಯ್ದುಕೊಂಡಿದ್ದರು. ಆಗ ಶ್ರೀ ಪು ತಿ ನರಸಿಂಹಾಚಾರ್ ಇವರ ಸಹೋದ್ಯೋಗಿಯಾಗಿದ್ದರಂತೆ. ಆತ್ಮೀಯರೂ ಆಗಿದ್ದರಂತೆ. ಆಗಿಂದಲೂ ಇವರಿಗೆ ಸಾಹಿತ್ಯದತ್ತ ಒಲವು.
ಕವಿಯೂ ಆಗಿರುವ ಕಾಟ್ಕರರಿಗೆ ಗೀತೆ ರಚಿಸುವ, ಸಂಗೀತ ಸಂಯೋಜನೆ ಮಾಡುವ ಹವ್ಯಾಸಗಳೂ ಇದ್ದವಂತೆ. ಆದರೆ ತಾನೇನಾದರೂ ಸೇನೆಗೆ ಸೇರದೆ ಶಿಕ್ಷಕನಾಗಿಯೇ ಇದ್ದಿದ್ದರೆ ಮನಸ್ಸಿಗೆ ಖಂಡಿತ ನೆಮ್ಮದಿ- ಸಮಾಧಾನ ಸಿಗುತ್ತಿರಲಿಲ್ಲವೆನ್ನುತ್ತಾರೆ ಅವರು. ಸೇನೆಯ ಬಗ್ಗೆ ಅವರಿಗೆ ಅಂತಹ ಒಲವು!
ಕಾಟ್ಕರ್, ಸ್ವತಂತ್ರ್ಯಪೂರ್ವದಿಂದಲೂ ಸೇನೆಯಲ್ಲಿದ್ದವರು. ಹಾಗೆ ಆಂಗ್ಲರ ಅಧೀನರಾಗಿದ್ದ ಕಾಲದ ಒಂದು ಕಹಿ ಘಟನೆಯನ್ನು ಅವರು ನೆನೆಸಿಕೊಂಡರು.
ಅದೊಂದು ದಿನ ಕಾಟ್ಕರ್ ಕಂಟೋನ್ಮೆಂಟಿಗೆ ಹೋಗುತ್ತಾರೆ. ಅಲ್ಲಿ ವರಿಗೊಂದು ಮಿಲಿಟರಿ ಟೊಪ್ಪಿ ಕೊಳ್ಳುವುದಿರುತ್ತದೆ. ಅಲ್ಲೊಂದು ಟೊಪ್ಪಿ ಆಯ್ದು, ಅದಕ್ಕಾಗಿ ಅವರು ಎಂಟಾಣೆಯನ್ನೂ (ಅದರ ಬೆಲೆ) ಕೊಟ್ಟು ಕಾಯುತ್ತ ನಿಲ್ಲುತ್ತಾರೆ…. ಆದರೆ, ಅಲ್ಲೊಂದು ನಿಯಮವಿರುತ್ತದೆ. ಸಂಜೆ ಆರರ ನಂತರ ಭಾರತೀಯರು ಯಾರೂ ಕಂಟೋನ್ಮೆಂಟಿಗೆ ಕಾಲಿಡುವಂತಿಲ್ಲ!
ಇತ್ತ ಸಮಯ ಜಾರುತ್ತಿದೆ… ಆರು ಗಂಟೆಗೆ ಇನ್ನೊಂದೇ ಒಂದು ನಿಮಿಷ ಬಾಕಿ… ಬಿಲ್ ಬರೆಯುತ್ತಿದ್ದ ಬಿಳಿಯ ಬೇಕಂತಲೇ ತಡ ಮಾಡುತ್ತಿದ್ದಾನೆ… ಕಾಟ್ಕರರಿಗೆ ತಳಮಳ. ತಾವಿರುವ ಸ್ಥಳದಿಂದ ಕಂಟೋನ್ಮೆಂಟಿಗೆ ಬರಲು ಮತ್ತೆ ಖರ್ಚು ಮಾಡಬೇಕು, ಸಮಯವೂ ಹಾಳು.
ಅಗೋ! ಆರು ಗಂಟೆ ಬಡಿದೇಬಿಡುತ್ತದೆ. ಕಾಟ್ಕರ್ ಅದೆಷ್ಟು ಕೇಳಿಕೊಂಡರೂ ಬಿಳಿಯರು ಅವರನ್ನು ಅಲ್ಲಿರಗೊಡುವುದಿಲ್ಲ. ಯುವಕ ಕಾಟ್ಕರ್, ಅವಮಾನದಿಂದ ತಲೆ ತಗ್ಗಿಸಿಕೊಂಡು ಹೊರಬರುತ್ತಾರೆ…
~
ಕಾಟ್ಕರ್ ಪರಾಧೀನತೆಯ ತಮ್ಮ ಅನುಭವ ಸಂಕಟಗಳನ್ನು ವಿವರಿಸುತ್ತಿದ್ದರೆ, ಇತ್ತ ಕೇಳುತ್ತ ಕುಳಿತಿದ್ದ ಹುಡುಗರು, ತಾವು ಮತ್ತೆಂದೂ ಅಂತಹ ಸ್ಥಿತಿಗೆ ಜಾರದಿರುವಂತಾಗಬೇಕು, ಅದಕ್ಕೆ ನಾವು ಎಚ್ಚರದಿಂದಿರಬೇಕು ಎಂದು ಪಣ ತೊಡುತ್ತಿದ್ದರು.
ಶಿಬಿರದ ದಿನ ಆರತಿ ಅಕ್ಕ, ಮಹಮದ್ ಅನ್ವರ್, ಚಕ್ರವರ್ತಿ ಅವರ ಅವಧಿಗಳೂ ಇದ್ದವು. ಆ ಬಗ್ಗೆ ಮತ್ತೆ ಬರೆಯುವೆ. ಕೊನೆಯಲ್ಲಿ ಗಣೇಶ್ ದೇಸಾಯಿ ಅವರ ಗೀತಗಾಯನವಂತೂ ನಮ್ಮನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತ್ತು. ಖುದ್ದು ಅವರಿಗೂ ತಾವು ಹಾಡಿದ್ದು ಸಾಲಲಿಲ್ಲ ಅನ್ನುವಷ್ಟರ ಮಟ್ಟಿಗೆ ಎಲ್ಲರೂ ಅದರಲ್ಲಿ ಲೀನವಾಗಿದ್ದರು!
ರಾಷ್ಟ್ರ ಶಕ್ತಿ ಕೇಂದ್ರದ ಮೂಲ ಉದ್ದೇಶ ಇಂದಿನ ಪೀಳಿಗೆಯನ್ನು ಒಳಗಿನಿಂದಲೂ ಗಟ್ಟಿಗೊಳಿಸುವುದು. ಸದೃಢ- ಸ್ವಾಭಿಮಾನೀ ಯುವ ಪಡೆಯನ್ನು ಸಜ್ಜುಗೊಳಿಸುವುದು.
ರಾಷ್ಟ್ರೀಯತೆ ಒಬ್ಬ ವ್ಯಕ್ತಿ ಹೊಂದಿಕೊಂಡಿರುವ ಭೌಗೋಳಿಕತೆ, ಸಂಸ್ಕೃತಿ, ಅಲ್ಲಿನ ಜನ ಜೀವನ, ನಾಗರಿಕತೆಗಳಿಗೆ ಸಂಬಂಧಪಟಿರುವಂಥದ್ದು. ಆ ವ್ಯಕ್ತಿ ಈ ನೆಲ, ಈ ಜಲ ‘ನನ್ನದು’ ಎಂದು ಹೇಳುವಾಗ ಹೆಮ್ಮೆಯಿಂದ ಬೀಗುವುದಿದೆಯಲ್ಲ, ಅದೇ ರಾಷ್ಟ್ರೀಯತೆಯ ಉತ್ಕೃಷ್ಟ ಉದಾಹರಣೆ ಎಂದರೆ ತಪ್ಪಲ್ಲ. ಪ್ರತಿಯೊಂದು ದೇಶದ ಪ್ರಜೆಗೂ ಆಯಾ ದೇಶದ ಬಗೆಗೆ ಉನ್ನತ ಗೌರವ ಭಾವನೆ, ನಿಷ್ಠೆ ಇದ್ದೇಇರುತ್ತದೆ, ಇರಲೇಬೇಕು.
ನಮ್ಮ ಪಾಲಿಗೆ ‘ನಾನು ಭಾರತೀಯ’ ಎನ್ನುವುದೇ ರಾಷ್ಟ್ರೀಯತೆ. ಇಲ್ಲಿನ ಪ್ರತಿಯೊಂದೂ ನಮಗೆ ಸ್ವರ್ಗ ಸಮಾನ. ಇಲ್ಲಿನ ಇತಿಹಾಸ, ಕಲೆ, ಸಾಹಿತ್ಯ, ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಳು ಎಲ್ಲವೂ ನಮಗೆ ಶ್ರೇಷ್ಟವೇ. ಆದರೆ ಇದು ಅಂಧಾಭಿಮಾನವಲ್ಲ. ಇಡಿಯ ಜಗತ್ತಿನ ಈವರೆಗಿನ ಇತಿಹಾಸದಲ್ಲಿ ಅನ್ಯ ಧರ್ಮಗಳ ಮೇಲೆ ಅತ್ಯಾಚಾರ ಮಾಡದ, ಅನ್ಯ ರಾಷ್ಟ್ರಗಳನ್ನು ಅತಿಕ್ರಮಣ ಮಾಡದ ಪರಿಶುದ್ಧ ಇತಿಹಾಸ ನಮ್ಮದು. ತಾವು ಕಾಡಿನೊಳಗೆ ಉಪವಾಸವಿದ್ದು ಹೊರಗಿನ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಋಷಿಗಳು, ದ್ರಷ್ಟಾರರು ನಮ್ಮವರೆನ್ನುವ ಹೆಮ್ಮೆ ನಮ್ಮದು.
ಆದರೆ… ಈ ಹೆಮ್ಮೆ ನಮ್ಮಲ್ಲಿ ಎಷ್ಟು ಜನರಿಗೆ ಇದೆ? ನಮ್ಮ ಯುವ ಜನರ ರಾಷ್ಟ್ರೀಯ ಪ್ರಜ್ಞೆ ಕೇವಲ ಕ್ರಿಕೆಟಿಗೆ ಸೀಮಿತವಾಗಿಬಿಟ್ಟಿದೆಯೇ? ರಾಷ್ಟ್ರೀಯತೆ ಅನ್ನುವುದು ಯಾವುದೋ ಒಂದು ಧರ್ಮದ, ಸಂಘಟನೆಯ ತಲೆನೋವು ಎನ್ನುವ ಭಾವನೆ ಮೂಡತೊಡಗಿದ್ದು ಯಾವಾಗ? ಯಾವ ಕಾರಣದಿಂದ ಇಂದು ಸಿಮಿ ಯಂಥ ವಿದ್ಯಾರ್ಥಿ ಸಂಘಟನೆ ದೇಶದ ಹಿತವನ್ನು ಮರೆತು ವಿದೇಶೀಯ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಾ ಅವರ ಕುಕೃತ್ಯಗಳಲ್ಲಿ ಪಾಲುದಾರನಾಗುತ್ತಿರುವುದೇಕೆ? ಧರ್ಮ ರಾಷ್ಟ್ರನಿಷ್ಟೆಯನ್ನು ಬದಲಾಯಿಸುತ್ತದೆಯೆನ್ನುವ ಮಾತು ನಿಜವೇ? ನಾಗಾಲ್ಯಾಂಡಿನಲ್ಲಿ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಬೋರ್ಡು ಯಾಕಿದೆ? ಪ್ರತ್ಯೇಕತಾವಾದಿಗಳೊಡನೆ ಕದನ ವಿರಾಮ ಘೋಷಣೆಗೂ ರಕ್ಷಣಾ ಸಚಿವರು ಪಾದ್ರಿಯ ಜೊತೆ ಒಪ್ಪಂದದ ಮಾತನಾಡಬೇಕಾಗಿ ಬರುತ್ತದಲ್ಲಾ, ಯಾಕೆ? ಇವತ್ತಿಗೂ ಸ್ವಾತಂತ್ರ್ಯೋತ್ಸವದ ದಿನ ಕೆಲವು ಏರಿಯಾಗಳಲ್ಲಿ ಹಸಿರು ಧ್ವಜ ಹಾರುವುದೇಕೆ? ಯಾಕೆ ಕೋಟಿಗಟ್ಟಲೆ ಹಣದ ಅಡಮಾನದ ನಂತರವಷ್ಟೇ ಅಮರನಾಥ ದೇಗುಲಕ್ಕೆ ಭೂಮಿಯನ್ನು ತಾತ್ಕಾಲಿಕವಾಗಿ ಕೊಟ್ಟರೂ ಸಮಾಜ ಬಾಂಧವರು ಪ್ರತಿಭಟನೆ ನಡೆಸುತ್ತಿದ್ದಾರೆ? ವಂಚಕ ನೆರೆದೇಶ ಪಾಕಿಸ್ತಾನ ಅತಿಕ್ರಮಣದಿಂದ ಕಾಶ್ಮೀರದ ಭಾಗವೊಂದನ್ನು ಕಿತ್ತುಕೊಂಡು ಚೀನಾ ಸೇನೆಗೆ ಉಡುಗೊರೆಯಾಗಿ ನೀಡಿತಲ್ಲ, ಆಗ ಯಾಕೆ ಈ ಜನರ ಕಣ್ಣುರಿಯಲಿಲ್ಲ? ಎಲ್ಲಿದೆ ರಾಷ್ಟ್ರೀಯತೆ?
ಪ್ರಶ್ನೆಗಳು ಸಾಕಷ್ಟಿದೆ.
ಇದನ್ನು ನಾವೆಲ್ಲ ಸೇರಿ ಚರ್ಚಿಸಬಹುದೇ?
ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.
-ತುಮಕೂರಿನಲ್ಲಿ ‘ಹಿಂದುತ್ವ ಮತ್ತು ಸಾಮಾಜಿಕ ಸಾಮರಸ್ಯ’ ಕುರಿತ ಪ್ರಬುದ್ಧರ ವಿಚಾರಗೋಷ್ಟಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಮಂಡಿಸಿದ ಪ್ರಬಂಧದ ಆಯ್ದ ಭಾಗ.
‘ಸಾಮರಸ್ಯ’ ಹಿಂದೂ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಪಿಡುಗು. ಹಿಂದೂ ಸಮಾಜ, ಅತ್ಯಂತ ಶ್ರೇಷ್ಠ ಸಮಾಜ. ಇದು ಅತ್ಯಂತ ವಿಶಾಲವಾದುದೂ ಹೌದು. ತನ್ನೊಳಗೇ ಎದ್ದ ಶಿಥಿಲತೆಯ ಅಲೆಗಳನ್ನು ತಳ್ಳುತ್ತ ನಿಷ್ಕಳಂಕವಾಗಿ ಸಾಗಿಬಂದಿರುವ ಧರ್ಮ ಇದು. ಆದರೆ, ಎಲ್ಲೋ ಒಂದೆಡೆ ಅಸ್ಪೃಶ್ಯತೆಯೆಂಬ ಮಹಾಪಾಪ ಹಿಂದೂ ಧರ್ಮಕ್ಕೆರಗಿದ ಅಭಿಶಾಪದಂತೆ ಕಂಡು ಬರುತ್ತಿದೆ.
ಚತುರ್ವರ್ಣಗಳು ಸೃಷ್ಟಿಯಾದದ್ದೇ ಅಸ್ಪೃಸ್ಯತೆಯ ಕಾರಣವಾಯಿತೆ? ಬಹುಶಃ ಇರಲಾರದು. ಗುಣ- ಕರ್ಮಗಳಿಂದ ವಿಭಜಿತವಾದ ಈ ವರ್ಣಗಳು ಅನೇಕತೆಯಲ್ಲಿ ಏಕತೆಯನ್ನು ತಂದವೇ ಹೊರತು ಏಕಸೂತ್ರವಾಗಿದ್ದ ಸಮಾಜವನ್ನು ಅನೇಕವಾಗಿಸಲಿಲ್ಲ. ಆದರೆ, ವರ್ಣಪದ್ಧತಿಯ ಅನುಯಾಯಿಗಳು ಅದನ್ನು ಶಿಥಿಲಗೊಳಿಸುತ್ತ ಸಾಗಿದಂತೆ ಈ ಎಲ್ಲ ಅತಿರೇಕಗಳೂ ಹುಟ್ಟಿಕೊಂಡವು. ಹಾಗಾದಾಗಲೆಲ್ಲ ಬುದ್ಧ -ಬಸವರು, ರಮಣ- ನಾರಾಯಣರು, ಗಾಂಧಿಯಂಥ ಮಹಾತ್ಮರು ಹುಟ್ಟಿಬಂದು ಅದನ್ನು ತಿದ್ದುವ ಯತ್ನ ಮಾಡಿದರು. ಸ್ವಾಮಿ ವಿವೇಕಾನಂದರಂತೂ, ‘ಅಸ್ಪೃಶ್ಯತೆ ಪಾಪವಲ್ಲದಿದ್ದಲ್ಲಿ, ಇನ್ಯಾವುದೂ ಪಾಪವೇ ಅಲ್ಲ’ ಅಂದುಬಿಟ್ಟರು.
ಭಾರತದಲ್ಲಿ ಅಸ್ಪೃಶ್ಯತೆ ಇರಲೇ ಇಲ್ಲವೆಂದರೆ ತಪ್ಪಾದೀತು. ಆದರೆ ಅದು ಬ್ರಿಟಿಷರ ಕಾಲದ ಮತ್ತು ನಂತರದ ಭಾರತದಲ್ಲಿನಷ್ಟು ವ್ಯಾಪಕವಾಗಿರಲಿಲ್ಲ, ಕ್ರೂರವಾಗಿರಲಿಲ್ಲ. ಮಡಿ ಮೈಲಿಗೆಗಳ ಆಚರಣೆ ಇತ್ತಾದರೂ ದೇಶದ ಎಲ್ಲ ಭಾಗಗಳಲ್ಲಿ ನಾವು ಅದನ್ನು ಕಾಣುವುದು ಸಾಧ್ಯವಿರಲಿಲ್ಲ. ಆದರೆ, ಹದಿನೆಂಟನೆಯ ಶತಮಾನದಿಂದೀಚೆಗೆ ಅದು ಹಬ್ಬಿದ ಪರಿ ಮಾತ್ರ ಅತ್ಯಂತ ಆಘಾತಕಾರಿಯಾಗಿತ್ತು. ಅಸ್ಪೃಶ್ಯತೆ ಯಾವ ವೇಗದಲ್ಲಿ ಸಮಾಜವನ್ನೇ ನುಂಗುವಷ್ಟು ವ್ಯಾಪಕವಾಗಿ ಹಬ್ಬಲರಂಭಿಸಿತೋ, ಅದಕ್ಕೆ ಪ್ರತಿಯಾಗಿ ಅದೇ ವೇಗದಲ್ಲಿ ಸಮಾಜ ಸುಧಾರಕರ ಕಾಳಜಿಯಿಂದ ಅದನ್ನು ದಮನ ಮಾಡುವ ಪ್ರಯತ್ನಗಳೂ ನಡೆದವು. ಆದರೆ, ಯಾವೆಲ್ಲ ಪ್ರಯತ್ನದ ನಂತರ ಇನ್ನೇನು ಅಸ್ಪೃಶ್ಯತೆ ಅಳಿದೇ ಹೋಯ್ತು ಎಂದು ಭಾವಿಸಲಾಗಿತ್ತೋ, ಆಗ ಇದ್ದಕ್ಕಿದ್ದ ಹಾಗೆ ಅದು ಮತ್ತೆ ಭುಗಿಲೆದ್ದು ನಿಂತಿದ್ದನ್ನು ನಾವು ನಂತರದ ಇತಿಹಾಸದುದ್ದಕ್ಕೂ ಕಾಣಬಹುದು.
ಇದಕ್ಕೇನು ಕಾರಣ?
ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿ ಧರಮ್ ಪಾಲ್ ಜೀ ತಮ್ಮ ಬ್ಯೂಟಿಫುಲ್ ಟ್ರೀ ಪುಸ್ತಕದಲ್ಲಿ ಸ್ಪಷ್ಟ ದಾಖಲೆಗಳ ಸಹಿತ ವಿವರಿಸಿರುವಂತೆ, ಹದಿನೆಂಟನೇ ಶತಮಾನದ ಆದಿಯಲ್ಲಿ ಭಾರತದಲ್ಲಿ ಸಮಾಜದ ಎಲ್ಲ ವರ್ಗದ ಜನ ಒಟ್ಟಾಗಿ ಶಾಲೆಗೆ ಹೋಗುತ್ತಿದ್ದರು, ಅಧ್ಯಯನ ಮಾಡುತ್ತಿದ್ದರು. ಶಿಕ್ಷಕರಲ್ಲಿಯೂ ಬಹುಪಾಲು ಜನ ಬ್ರಾಹ್ಮಣೇತರರೇ ಆಗಿರುತ್ತಿದ್ದರು.
ಆಂಗ್ಲರು ಬರುವ ಮುನ್ನವಂತೂ ನಮ್ಮಲ್ಲಿ ಅಸ್ಪೃಶ್ಯರ ಸಂಖ್ಯೆಯನ್ನು ನಮೂದಿಸುವ ಪರಿಪಾಠವೇ ಇರಲಿಲ್ಲ. ಅವರನ್ನು ಬೇರೆ ಮಾಡಿ ನೀವು ಇಂಥವರು, ನಿಮ್ಮ ಸಂಖ್ಯೆ ಇಷ್ಟು ಎಂದು ಪ್ರತ್ಯೇಕವಾಗಿಸುವ ಮನೋಭಾವವೇ ಇರಲಿಲ್ಲ! ಇಷ್ಟಕ್ಕೂ ಭಾರತದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದ ಕರಕುಶಲ ಕಲೆಯಿದ್ದದ್ದು, ಭಾರತದ ಚೇತನ ಅಡಗಿದ್ದದ್ದು ಈ ವರ್ಗದ ಜನರಲ್ಲಿಯೇ. ಆದ್ದರಿಂದಲೇ ಬಿಳಿಯರಿಗೆ ಈ ವರ್ಗದ ಜನರನ್ನು ಬೇರ್ಪಡಿಸುವ ಅನಿವಾರ್ಯತೆ ಕಂಡುಬಂದಿದ್ದು. ಈ ಒಡೆದಾಳುವ ನೀತಿಯಿಂದಲೇ ಅವರು ಸುಂದರ ಸಮಾಜವೊಂದನ್ನು ತುಂಡುತುಂಡಾಗಿಸಿದ್ದು.
ಹಾಗೆಂದು, ಬ್ರಿಟಿಷರು ಇಲ್ಲಿದ್ದಷ್ಟೂ ದಿನ ನಮ್ಮಲ್ಲಿ ಉನ್ನತ ವರ್ಗ(ಎಂದು ಕರೆಸಿಕೊಳ್ಳುವ)ದವರೇನೂ ಸ್ಪೃಶ್ಯರಾಗಿರಲಿಲ್ಲ. ಬಿಳಿಯರ ಪಾಲಿಗೆ ಭಾರತದ ಬ್ರಾಹ್ಮಣರೂ ಅಸ್ಪೃಶ್ಯರೇ!
ಮಸ್ಸೂರಿಯ ಬಜಾರಿನಲ್ಲಿ ಎರಡು ರಸ್ತೆಗಳಿವೆ. ಒಂದು ಕೆಳಭಾಗದಲ್ಲಿದ್ದರೆ, ಮತ್ತೊಂದು ಬಜಾರಿಗೆ ಹೊಂದಿಕೊಂಡಂತೆ ಇರುವ ಎತ್ತರದ ರಸ್ತೆ. ಆ ಎತ್ತರದ ರಸ್ತೆಯಲ್ಲಿ ಬ್ರಾಹ್ಮಣನೇ ಆಗಿರಲಿ, ಶೂದ್ರನೇ ಆಗಿರಲಿ, ಯಾವ ಭಾರತೀಯನೂ ನಡೆಯುವಂತಿರಲಿಲ್ಲ. ಪ್ರತಿಯೊಬ್ಬ ಭಾರತೀಯನೂ ಕೆಳರಸ್ತೆಯಿಂದಲೇ ಹಾದುಹೋಗಬೇಕಾಗಿತ್ತು. ಇದು ಮಸ್ಸೂರಿ ಮಾತ್ರವಲ್ಲ, ಬಹುತೇಕ ಇಡಿಯ ರಾಷ್ಟ್ರದ ಕಥೆಯಾಗಿತ್ತು.
ಬಹುಶಃ ಇಂಥ ಶೋಷಣೆಯೇ ಉನ್ನತವರ್ಗದವರು ಕೆಳವರ್ಗದ ಮೇಲೆ ಶೋಷಣೆ ನಡೆಸಿ ಸೇಡು ತೀರಿಸಿಕೊಳ್ಳುವ ಪರಿಪಾಠ ತೀವ್ರವಾಗಿರಬೇಕು.
ಆದರೆ, ಇಂತಹ ಅಧಾರ್ಮಿಕ ಸಂಗತಿಗಳು ನಡೆದಾಗಲೆಲ್ಲ ಅದನ್ನು ಸರಿಪಡಿಸಲು ಮಹಾತ್ಮನೊಬ್ಬ ಮುಂದೆ ಬರುವುದು ಭಾರತದ ವೈಶಿಷ್ಟ್ಯ. ಶ್ರೀ ರಾಮಕೃಷ್ಣ ಪರಮಹಂಸರನ್ನು ಅವರ ಸಾಲಿನಲ್ಲಿ ಮೊದಲನೆಯವರಾಗಿ ಹೆಸರಿಸಬಹುದು. ಅವರಂತೂ ತಮ್ಮ ಉಪನಯನದ ದಿನ ಭಿಕ್ಷೆ ಸ್ವೀಕರಿಸಿದ್ದು ‘ಧನಿ’ ಎಂಬ ಕೆಲಸದಾಕೆಯಿಂದ- ಶೂದ್ರ ಹೆಂಗಸಿನಿಂದ. ಅವರ ಶ್ರೇಷ್ಟ ಶಿಷ್ಯ ವಿವೇಕಾನಂದರು ತಮ್ಮ ಜೀವನದ ಅತ್ಯುನ್ನತ ಬೋಧನೆಯಾಗಿ ನೀಡಿದ್ದು, ಸಾಮರಸ್ಯದ ಚಿಂತನೆಯನ್ನು.
ಎಲ್ಲಕ್ಕಿಂತ ಒಂದು ವಿಷಯವನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ‘ಸಾಮರಸ್ಯ’ ಮತ್ತು ‘ಹೊಂದಾಣಿಕೆ’ ಇವೆರಡೂ ಬೇರೆ ಬೇರೆ ಸಂಗತಿಗಳು. ನಮ್ಮ ಕೆಲಸವಾಗಬೇಕಾದಾಗ ‘ವಿಧಿಯಿಲ್ಲದೆ’ ಮಾಡಿಕೊಂದ ಒಪ್ಪಂದ ಸಾಮರಸ್ಯವಾಗಲಾರದು. ತೋರುಗಾಣಿಕೆಗೆಂದೋ, ಕಾನೂನಿನ ಕಾರಣದಿಂದಲೋ ತೋರಿಸುವ ಗೌರವ ಎಂತಿದ್ದರೂ ಕೃತಕವೇ. ಅದು ಖಂಡಿತ ಮನಸ್ಸುಗಳನ್ನು ಬೆಸೆದು ಸಾಮರಸ್ಯ ಮೂಡಿಸಲಾರದು.
ಹೊಲದಲ್ಲಿ ದುಡಿದು ಬರುವ ಆಳುಗಳಿಗೆ ಹಿತ್ತಿಲಲ್ಲಿ ಕುಳ್ಳಿರಿಸಿ ಊಟ ಹಾಕಿ ಎಲೆ ಎತ್ತುವಂತೆ ಹೇಳುವ, ಮನೆ ಒಳಗಿನವರೆಗೂ ಸಿಲಿಂಡರ್ ತರಿಸಿಕೊಂಡು ಅಡುಗೆ ಮನೆಗೆ ಸೇರಿಸದೆ ಹಾಗೇ ಕಳುಹಿಸಿಬಿಡುವ, ಅಸ್ಪೃಶ್ಯ ಹುಡುಗ ತಂದುಕೊಡುವ ಹಾಲನ್ನು ಕುಡಿಯುತ್ತಲೇ ಆತನನ್ನು ಮುಟ್ಟಲು ಹಿಂದೇಟು ಹಾಕುವ, ಹಜಾಮತಿನ ನಂತರ ‘ಮೈಲಿಗೆ’ ಯ ಕಾರಣವೊಡ್ಡಿ ಸ್ನಾನ ಮಾಡುವ ಜನರನ್ನು ಕಂಡರೆ ನನಗಂತೂ ಅಸಹ್ಯವಾಗುತ್ತದೆ.
ಹಿಂದೂ ಧರ್ಮದಲ್ಲಿ ಯಾವ ವರ್ಗವನ್ನೂ ‘ಅಸ್ಪೃಶ್ಯ’ ಎಂದು ನಿರ್ದೇಶಿಸಿಲ್ಲ. ಹಾಗೊಂದು ವೇಳೆ ನಾವು ಯಾರನ್ನಾದರೂ ಹಾಗೆ ಕರೆದರೆ, ಸ್ವತಃ ನಾವೇ ಧರ್ಮಭ್ರಷ್ಟರೆಂದರ್ಥ!
ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.
ನಾವೆಲ್ಲ ನೆನಪಿಡಬೇಕಾದ ಸಂಗತಿಯೊಂದಿದೆ. ಹಿಂದೂ ಧರ್ಮ ಉಳಿದಿರೋದು ಮೇಲ್ವರ್ಗದ ಜನರ ಕಾರಣದಿಂದಲ್ಲ. ಪ್ರತಿ ಬಾರಿ ಅನ್ಯ ದೇಶೀಯರ- ಅನ್ಯ ಧರ್ಮೀಯರ ಆಕ್ರಮಣವಾದಾಗಲೂ ಅವರು ಕೈಹಾಕಿದ್ದು ಹಿಂದೂ ಧರ್ಮದ ಬೇರು ಎನಿಸಿಕೊಂಡಿದ್ದ ಕೆಳವರ್ಗದತ್ತಲೇ ಹೊರತು ಮೇಲ್ವರ್ಗದ ಮೇಲಲ್ಲ. ಮೊಘಲರ ಕಾಲದಲ್ಲಿ, ‘ಮತಾಂತರಗೊಳ್ಳಿ, ಇಲ್ಲವೇ ನಮ್ಮ ಅಂತಃಪುರದ ಪಾಯಿಖಾನೆಯ ಮಲ ಹೊರಿ’ ಎಂಬ ಆಯ್ಕೆ ಎದುರಾದಾಗ ಮಲ ಹೊರುವುದನ್ನೇ ಆಯ್ದುಕೊಂಡು ಹಿಂದೂಗಳಾಗಿ ಉಳಿದ ಜನ ಅವರು! ಇವತ್ತು ಹಿಂದೂ ಧರ್ಮ ಉಳಿದಿದ್ದರೆ, ಅದು ಇಂಥ ಕೋಟಿ ಕೋಟಿ ಜನರ ಕಾರಣದಿಂದ. ಅಂಥವರನ್ನೆ ಕೀಳೆಂದು ಜರಿದು ಹೊರಗಿಡುವ ಮನಸ್ಸು ಅದಿನ್ನೆಷ್ಟು ವಿಕೃತ ಎಂದು ಒಮ್ಮೆ ಯೋಚಿಸಿ.
~ ಚಕ್ರವರ್ತಿ ಸೂಲಿಬೆಲೆ
ನಡುಗಿತ್ತು ಅಮೆರಿಕ…
ಯಾರೇ ಆಗಲಿ, ತಾವು ಎಷ್ಟೇ ಬಲಶಾಲಿಗಳೆಂದು ಬೀಗಿದರೂ ಅವರಿಗಿಂತ ಸರ್ವಶಕ್ತನಾದ ಭಗವಂತನೊಬ್ಬ ಇದ್ದೇ ಇದ್ದಾನೆ.
ಕ್ರೈಸ್ತ ಜನಾಂಗ ವಿಶ್ವದ ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಿ, ಹಿಂಸೆಯಿಂದ, ಕುಯುಕ್ತಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿತು. ಕೊಳ್ಳೆಹೊಡೆದ ಹಣದ ಮದದಿಂದಲೇ ಜಗತ್ತನ್ನು ಅಡಿಯಾಳಗಿಸಿಕೊಳ್ಳಲು ಹವಣಿಸಿತು.
ಒಸಾಮಾ ಬಿನ್ ಲ್ಯಾಡೆನ್, ಇಂತಹ ಮದದಿಂದ ಬೀಗುತ್ತಿದ್ದ ಅಮೆರಿಕೆಯ ಮೇಲೇರಿಹೋಗಿ ಭಯೋತ್ಪಾದನೆಯ ಮೂಲಕ (ಅದಂತೂ ಧರ್ಮಾಂಧತೆಯ ಮತ್ತೊಂದು ಮುಖ) ವರ್ಲ್ಡ್ ಟ್ರೇಡ್ ಬಿಲ್ಡಿಂಗನ್ನು ಕೆಡವಿ ಅಮೆರಿಕೆಯನ್ನು ಗಲಗಲ ಅಲುಗಿಸಿಬಿಟ್ಟ. ಎರಡು ಕ್ರೂರ ಜನಾಂಗಗಳು ಧರ್ಮಾಂಧತೆಯ ಅಂಧಕಾರದಲ್ಲಿ ವರ್ತಿಸಿದ ಪರಿ ಇದು. ಹಾಗೆ ಲ್ಯಾಡೆನ್ ವಿಮಾನದ ಮೂಲಕ ಕಟ್ಟಡಗಳ ಮೇಲೆ ತನ್ನ ಬಂಟರನ್ನು ಛೂಬಿಟ್ಟಿದ್ದು, ಈಗ್ಗೆ ಎಳು ವರ್ಷಗಳ ಕೆಳಗೆ, 2001ರ ಸೆಪ್ಟೆಂಬರ್ 11ರಂದು.
ಅವತ್ತು ಇಡೀ ಜಗತ್ತೇ ನಡುಗಿತ್ತು!
ಸುಮಾರು ನೂರಾ ಹದಿನೈದು ವರ್ಷಗಳ ಹಿಂದಿನ ಮಾತು. ಆಗ ಕೂಡ ಜಗತ್ತಿನ ಇತರೆಲ್ಲ ಧರ್ಮಗಳು ನಡುಗಿದ್ದವು. ತಲೆ ತಗ್ಗಿಸಿ ಕುಳಿತಿದ್ದವು. ಆಗ ಯಾವುದೇ ಹಿಂಸೆ ನಡೆದಿರಲಿಲ್ಲ. ಹಾಗೆ ನಡುಗಿಸಿದವನ ಮನದಲ್ಲಿ ಮೌಢ್ಯವಿರಲಿಲ್ಲ, ಆತ ಧರ್ಮಾಂಧನೂ ಆಗಿರಲಿಲ್ಲ.
ಕಾವಿಯುಟ್ಟ, ಉದಾತ್ತ ನಿಲುವಿನ ಆ ವೀರ ಸಂನ್ಯಾಸಿ ತನ್ನ ಧರ್ಮಕ್ಕೆ ತಕ್ಕ ಸಂಸ್ಕಾರದಿಂದ ಜಗತ್ತನ್ನುದ್ದೇಶಿಸಿ ಮಾತನಾಡಿದ್ದ. ನಿಜವಾದ ಧರ್ಮ ಇಂಥದ್ದು ಎಂದು ಗುಡುಗಿದ್ದ. ಆವರೆಗೂ ಭಾರತೀಯರೆಂದರೆ ಹುಟ್ಟಿದ ಮಗುವನ್ನು ಮೊಸಳೆಗೆಸೆಯುವವರು ಎಂಬ ಮೌಢ್ಯಕ್ಕೆ ಬಲಿಯಾಗಿದ್ದ ಜನ ಆ ಸಿಂಹ ವಾಣಿಗೆ ನಡುಗಿಹೋದರು. ಭರತೀಯತೆಯ, ಹಿಂದುತ್ವದ ನೈಜ ಪರಿಚಯ ಅಂದು ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿತು. ತನ್ನ ನಾಡಿನಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಿದ್ದ ಕ್ರೈಸ್ತರಿಗೆ ಆತ ಅಮೆರಿಕೆಯ ನೆಲದಲ್ಲಿ ನಿಂತು ಛಡಿಯೇಟು ಕೊಟ್ಟಿದ್ದ.
ಅದು, ವಿಶ್ವ ಧರ್ಮ ಸಮ್ಮೆಳನದ ಸಂದರ್ಭ. ಸ್ಥಳ- ಅಮೆರಿಕೆಯ ಚಿಕಾಗೋ, ದಿನಾಂಕ- 1893ರ ಸೆಪ್ಟೆಂಬರ್ 11 !
ಹಾಗೆ ಹಿಂದುತ್ತ್ವದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವ್ಯಕ್ತಿ- ಸ್ವಾಮಿ ವಿವೇಕಾನಂದ!!
ಧರ್ಮಾಂಧತೆಗೂ ಧರ್ಮ ಶ್ರದ್ಧೆಗೂ ಎಷ್ಟೊಂದು ವ್ಯತ್ಯಾಸ!?
ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಆಡಿದ ಮಾತುಗಳ ಸಾರಾಂಶ ನೀಡಲಿದ್ದೇವೆ ಕನ್ನಡದಲ್ಲಿ, ಅತಿ ಶೀಘ್ರದಲ್ಲಿ.
ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.
“ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.
ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.
ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||
ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”
ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||
ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯವ ಯವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’
ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”
ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.
ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.
ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!?
ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.
ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.
ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!
ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?
“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.
ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”
ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”
ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.
ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.
ಅಲ್ಲಾವುದ್ದಿನ್ ಖಿಲ್ಜಿ ಮೇವಾಡದ ಗಡಿಗೆ ಸೈನ್ಯ ಸಮೇತ ಬಂದುಬಿಟ್ಟ. ತಾನು ಬರುವ ಸುದ್ದಿ ರಜಪೂತ ದೊರೆ ಭೀಮ ದೇವ ಸಿಂಹನಿಗೆ ತಿಳಿಯದಿರಲೆಂದು ಸಾಕಷ್ಟು ಪಾಡುಪಟ್ಟ. ಸಾಧ್ಯವಾಗಲಿಲ್ಲ. ರಾಜನಿಗೆ ಗೂಡಚಾರರು ಸುದ್ದಿ ಮುಟ್ಟಿಸಿದರು. ಭೀಮದೇವ ಸರ್ವ ಸನ್ನದ್ಧನಾದ. ಅಲ್ಲಾವುದ್ದಿನ್ ಹೆಜ್ಜೆ ಇಡುವ ಮುನ್ನವೇ ಮುಗಿಬೀಳಲು ಯೋಜನೆ ಹಾಕಿದ.
ಯುದ್ಧವೆಂದರೇನೇ ಕಳೆಗಟ್ಟುವ ಕುಲ ರಜಪೂತರದು. ಕದನವೇ ಇಲ್ಲದೆ ಒರೆಯೊಳಗಿಟ್ಟಿದ್ದ ಕತ್ತಿಯನ್ನು ಹೊರಗೆಳದರು ಸೈನಿಕರು. ರಣೋತ್ಸಾಹ ಮೈಮೇಲೇರಿತು.
ಇತ್ತ ಖಿಲ್ಜಿ ಹಗಲಿರುಳು ಪದ್ಮಿನಿ… ಪದ್ಮಿನಿ ಎನ್ನುತ್ತ ಮೈಮರೆತಿದ್ದ. ಭುವನದೊಳಗಿನ ಅಪ್ರತಿಮ ಸುಂದರಿ ಪದ್ಮಿನಿಯನ್ನು ಭೋಗಿಸಬೇಕೆನ್ನುವ ಬಯಕೆ ಅವನನ್ನು ಮೇವಾಡದ ಗಡಿಗೆ ಕರೆತಂದಿತ್ತು. ಗುರ್ಜರದ ರಾಣಿ ಕಮಲಾ ದೇವಿಯನ್ನು ಅಪಹರಿಸಿ ಅವಳ ಸೌಂದರ್ಯ ಸೂರೆಗೊಂಡಿದ್ದ ಅವನಿಗೆ ಪದ್ಮಿನಿ ಇಲ್ಲದ ತನ್ನ ಜನಾನಾ ಮೌಲ್ವಿಯಿಲ್ಲದ ಮಸೀದಿ ಎನಿಸುತ್ತಿತ್ತಂತೆ! ಈಗ ಅವನು ಅಲ್ಲಿಗೆ ಬಂದಿದ್ದು ಅದೇ ಕಾರನಕ್ಕೆ. ಮೋಸದಿಂದ ಪದ್ಮಿನಿಯನ್ನು ತನ್ನ ಜನಾನಾಗೆ ಒಯ್ಯುವುದಕ್ಕೆ!
ರಜಪೂತರೇನೂ ಬಾಯಿಗೆ ಬೆಟ್ಟು ಹಾಕಿ ಕುಳಿತಿರಲಿಲ್ಲ. ಈ ಬಾರಿ ಅಲ್ಲಾದ್ದೀನನ ಎದೆ ಝಲ್ಲೆನ್ನುವಂತೆ ಹೋರಾಡಿದರು. ಕತ್ತಿಗೆ ಕತ್ತಿಯ ಉತ್ತರ ಕೊಟ್ಟರು. ಬೆಂಕಿಯ ಚೆಂಡಿಗೆ ಬೆಂಕಿಯೇ ಪ್ರತಿಕ್ರಿಯೆಯಾಯ್ತು. ರಜಪೂತರ ಕದನದ ಕಾವಿಗೆ ಖಿಲ್ಜಿಯ ಸೇನೆ ಭಸ್ಮವಾಯ್ತು. ಕಂಡು ಕೇಳರಿಯದ ಸೋಲು ಖಿಲ್ಜಿಗೆ! ಅವನನ್ನು ಬಂಧಿಸಿ ರಾಜನೆದುರು ನಿಲ್ಲಿಸಿದರೆ, ನಾಚಿಕೆ ಬಿಟ್ಟು ಗೋಗರೆದ; “ಪ್ರಭೂ, ದೇವರ ದೇವ… ನನ್ನ ಬಿಟ್ಟುಬಿಡು ತಂದೆ. ತಪ್ಪಿ ನಿನ್ನೆದುರು ಕಾಳಾಗಕ್ಕೆ ನಿಂದೆ” ಎಂದ!
ಶರಣಾಗತರನ್ನು ಕ್ಷಮಿಸುವುದು ನಮ್ಮ ಧರ್ಮವಲ್ಲವೆ? ಭೀಮದೇವನ ಮನ ಕರಗಿತು. ಧರ್ಮದ ಮಾತಿಗೆ ಬೆಲೆ ಕೊಟ್ಟು ಅಧರ್ಮಿಯನ್ನು ಬಿಟ್ಟುಬಿಟ್ಟ!
ಜೀವವೇನೋ ಉಳಿಯಿತು. ಆದರೆ ಪದ್ಮಿನಿ!? ಖಿಲ್ಜಿ ಚಡಪಡಿಸಿದ. ಅವನ ಅಂಗಾಂಗಗಳೆಲ್ಲ ಸೋತವು. ಪದ್ಮಿನಿಯನ್ನು ಕಾಣದೇ ಬದುಕುವುದು ದುಸ್ತರವೆಂದು ಕೂಗಾಡಿದ. ಕಾಮೋದ್ರೇಕದಿಂದ ಮತ್ತನಾದ ಒಡೆಯನನ್ನು ರಕ್ಷಿಸಲು ಅವನ ಭಂಟ ಮಲ್ಲಿಕಾಫರ್ ಸಂಚು ಹೂಡಿದ. ‘ರಾಣಿಯನ್ನು ದೂರದಿಂದಲಾದರೂ ನೋಡಲು ಅವಕಾಶ ಕೊಡಿ’ ಎಂದು ಬಿನ್ನಯಿಸಿ ಖಿಲ್ಜಿಯಿಂದ ಭೀಮದೇವನಿಗೆ ಪತ್ರ ಬರೆಸಿದ. ಭೀಮದೇವನಿಗೆ ಅದೇನು ಮಂಕು ಕವಿದಿತ್ತೋ? ಇದೊಂದು ನಿರುಪದ್ರವ ಕೋರಿಕೆ ಎಂದು ಪರಿಗಣಿಸಿದ. ಪದ್ಮಿನಿಯ ವಿರೋಧದ ನಡುವೆಯೂ ಆಗಲೆಂದು ತನ್ನ ಸಮ್ಮತಿಪತ್ರ ಕಳಿಸಿಕೊಟ್ಟ.
ರಾಣಿ ಪದ್ಮಿನಿಯ ಚೆಲುವಿಗಿಂತ ಆಕೆಯ ಬುದ್ಧಿ ಒಂದು ಗುಲಗಂಜಿ ತೂಕದಷ್ಟು ಹೆಚ್ಚು. ತಾನು ಕಳುಹಿಸುವ ರಾಖಿ ಕಟ್ಟಿಸಿಕೊಂಡು ‘ಅಣ್ಣ’ನಾದರೆ ಮಾತ್ರ ಮುಖ ತೋರುವೆನೆಂದಳು. ಆಸ್ಥಾನಕ್ಕೆ ಬಂದ ಕಾಮುಕ ಖಿಲ್ಜಿಗೆ ತನ್ನ ಮುಖವನ್ನು ಕನ್ನಡಿಯ ಬಿಂಬದಲ್ಲಿ ತೋರಿಸಿ ಮಾತು- ಮಾನಗಳನ್ನು ಉಳಿಸಿಕೊಂಡಳು!
ಅಷ್ಟಕ್ಕೇ ಖಿಲ್ಜಿಯ ಎದೆಬಡಿತ ಏರುಪೇರಾಗಿಹೋಯ್ತು. ತನ್ನ ಜನಾನಾದ ಎಲ್ಲ ಹೆಂಗಸರನ್ನು ಇವಳ ಪಾದಸೇವೆಗಿಟ್ಟರೂ ಕಡಿಮೆಯೇ ಎಂದುಕೊಂಡ. ಅವನ ಚಡಪಡಿಕೆಯ ಹೊತ್ತಿಗೆ ಅವನ ಸೇವಕರು ಕೋಟೆಯ ಉದ್ದಗಲಗಳನ್ನು ಅಳೆದುಸುರಿದಿದ್ದರು. ಮನೆಗೆ ಬಂದ ಅತಿಥಿಯನ್ನು ಬೀಳ್ಕೊಡುವ ಸಂಪ್ರದಾಯ ಪಾಲಿಸಲು ಭೀಮದೇವ ಖಿಲ್ಜಿಯ ಡೇರೆವರೆಗೂ ನಡೆದ. ಖಿಲ್ಜಿಯ ಹುಟ್ಟುಬುದ್ಧಿ ಎಲ್ಲಿಹೋಗಬೇಕು? ತನ್ನ ಭಂಟರಿಗೆ ಸನ್ನೆ ಮಾಡಿ ರಾಜನನ್ನು ಬಂಧಿಸಿಬಿಟ್ಟ! ‘ನಿನ್ನ ಬಿಡುಗಡೆಯಾಗಬೇಕು ಅಂದರೆ, ನಿನ್ನ ರಾಣಿ ನನ್ನ ತೊಡೆಯ ಮೇಲೆ ಕೂರಬೇಕು’ ಎಂದು ಷರತ್ತು ಹಾಕಿದ. ರಜಪೂತರ ರಕ್ತ ಕುದಿಯಿತು. ಪರಸ್ತ್ರೀ ತಾಯಿ ಸಮಾನ ಎನ್ನುವ ಧರ್ಮ ನಮ್ಮದು. ರಾಣಿಯಂತೂ ಸಾಕ್ಷಾತ್ ದೇವಿಯೇ ಸರಿ. ಚಿತ್ತೋಡ ಮತ್ತೊಂದು ಕದನಕ್ಕೆ ಸಜ್ಜಾಯಿತು. ಈ ಬಾರಿ ಬಲು ಎಚ್ಚರಿಕೆಯ ಕದನ ನಡೆಯಬೇಕು. ರಾಜನ ಪ್ರಾಣ ಎದುರಾಳಿಯ ಕೈಲಿದೆ. ರಾಣಿಯ ಮಾನವೂ ಉಳಿಯಬೇಕಿದೆ!
ಮುನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಖಿಲ್ಜಿಯ ಕಡೆ ಹೊರಟವು. “ಬರಿ ರಾಣಿಯೊಬ್ಬಳೇಕೆ? ಜನಾನಾ ಅಲಂಕರಿಸಲು ರಾಣೀವಾಸದ ಹೆಂಗಸರೆಲ್ಲ ಬರುತ್ತಿದ್ದಾರೆ” ಎಂಬ ಮಾತು ಕೇಳಿಕೇಳಿಯೇ ಖಿಲ್ಜಿ ನಿದ್ದೆ ಕಳೆದುಕೊಂಡ. ಕಾಮುಕತೆಯಿಂದ ಹಸಿದ ನಾಯಿಗಿಂತಲೂ ಕಡೆ ಅವನು!
ಇತ್ತ ಡೇರೆ ಸಮೀಪಿಸಿದ ಪಲ್ಲಕ್ಕಿಗಳಲ್ಲೊಂದು ರಾಜ ಭೀಮದೇವನನ್ನು ಮಾತನಾಡಿಸಿತು. ಹಾಗೇ ಅವನನ್ನು ಹತ್ತಿಸಿಕೊಂಡು ಪಾರುಗಾಣಿಸಿಬಿಟ್ಟಿತು!
ಅಷ್ಟೇ,
ಪಲ್ಲಕ್ಕಿಯೊಳಗಿಂದ ಸುಂದರ ಹೆಣ್ಣುಗಳು ಹರಿದಾಡುವುದನ್ನು, ರಾಣಿ ಪದ್ಮಿನಿಯ ಕಾಣ್ಕೆಯ ತುಣುಕನ್ನು ಕಾಯುತ್ತ ಕುಳಿತಿದ್ದ ಖಿಲ್ಜಿ ಬಸವಳಿದು ಬಿದ್ದ!
ಪಲ್ಲಕ್ಕಿಯಿಂದ ಶಸ್ತ್ರ ಸಜ್ಜಿತರಾದ ರಜಪೂತ ಯೋಧರು! ಕದನಿಕಲಿಗಳಂತೆ ಮೈಮೇಲರಗಿದವರ ದಾಳಿಗೆ ತತ್ತರಿಸಿಹೋಯ್ತು ಖಿಲ್ಜಿಯ ತಂಡ.
ಸುಂದರ ಮೈಕಟ್ಟಿನ ಬಾದಲ್ ಪದ್ಮಿನಿಯ ವೇಷ ಧರಿಸಿದ್ದರೆ, ಉಳಿದ ಯೋಧರು ಸಖಿಯರ ವೇಷ ತೊಟ್ಟಿದ್ದರು. ಅಂತೂ ತಮ್ಮ ರಾಜನ ಪ್ರಾಣ, ರಾಣಿಯ ಮಾನ ಕಾಪಾಡುವಲ್ಲಿ ಯಶಸ್ವಿಯಾದರು. ಖಿಲ್ಜಿ, ಕಾಫರರನ್ನು ಬಂಧಿಸಿದರು.
ಆದರೇನು? ಧರ್ಮ ಬುದ್ಧಿ ಬಿಡಬೇಕಲ್ಲ? ರಣರಂಗದಲ್ಲಲ್ಲದೆ ಇಲ್ಲಿ ಕೊಲ್ಲುವುದು ಬೇಡವೆಂದು ಖಿಲ್ಜಿಗೆ ಜೀವದಾನ ಮಾಡಿಬಂದರು.
ಇತ್ತ ಚಿತ್ತ ಸ್ವಾಸ್ಥ್ಯ ಕಳಕೊಂಡ ಖಿಲ್ಜಿ ತನ್ನೂರಿಗೆ ಪಲಾಯನ ಮಾಡಿದ. ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಪದ್ಮಿನಿಯನ್ನು ಪಡೆಯದೆ ರಾಜನ ಹುಚ್ಚು ಬಿಡದೆಂದು ತೀರ್ಮಾನಿಸಿದ ಮಲ್ಲಿಕಾಫರ್ ದೊಡ್ಡದೊಂದು ಸೇನೆ ಸಜ್ಜುಗೊಳಿಸಿದ. ಕೋಟೆಯ ಆಯಕಟ್ಟಿನ ಜಾಗಗಳನ್ನಂತೂ ಮೊದಲೇ ಗೊತ್ತುಮಾಡಿಕೊಂಡಿದ್ದರು. ಈಗ ಏಕಾಏಕಿ ಚಿತ್ತೋಡಿನ ಮೇಲೆ ದಾಳಿಮಾಡಿಯೇಬಿಟ್ಟ.
ಈ ಬಾರಿ ಭೀಮದೇವ ನಿಜಕ್ಕೂ ಗಲಿಬಿಲಿಗೊಳಗಾಗಿದ್ದ. ಅವನ ಸೇನೆ ಸಿದ್ಧಗೊಳ್ಳುವ ಮುನ್ನವೇ ಕಾಫರನ ಸೇನೆ ಮುಗಿಬಿತ್ತು. ಮೂರ್ನಾಲ್ಕು ದಿನಗಳೊಳಗೆ ರಜಪೂತರ ಸಂಖ್ಯೆ ಕರಗಿತು. ‘ಪ್ರಾಣ ಕೊಟ್ಟೇವು, ಶರಣಾಗೆವು’ ಎನ್ನುತ್ತಲೇ ಅವರು ರಣಾಂಗಣದಲ್ಲಿ ವೀರಮರಣ ಕಂಡರು.
ಇನ್ನು…. ಭೀಮದೇವನ ಸಾವು. ಆನಂತರ ರಾಣಿ ಪದ್ಮಿನಿ, ಖಿಲ್ಜಿಯ ತೊಡೆ ಮೇಲೆ!?
ಇದನ್ನು ನೆನೆದಾಗಲೆಲ್ಲ ರಾಣಿಯ ದೇಹ ಕಂಪಿಸುತ್ತಿತ್ತು. ಪರಪುರುಷನನ್ನು ಕಣ್ಣೆತ್ತಿಯೂ ನೋಡದ ಮಹಾತಾಯಿ, ಅವನ ಜನಾನಾದಲ್ಲಿ ಲಲ್ಲೆಗರೆಯುತ್ತಾಳೆನ್ನುವುದು ಊಹೆಗೂ ಸಾಧ್ಯವಿಲ್ಲದ ಸಂಗತಿಯಾಗಿತ್ತು.
ಅಂದು ರಾತ್ರಿ ಪದ್ಮಿನಿ ಭಿಮದೇವನ ಬಳಿಸಾರಿದಳು. ಆತ ಎಂದಿನಂತಿಲ್ಲ. ‘ನಿನ್ನ ರಕ್ಷಿಸಲಾಗಲಿಲ್ಲವಲ್ಲ’ ಎಂಬ ಭಾವದಿಂದ ಸೋತ ಕಣ್ಣುಗಳವು. ಅದನ್ನು ಗುರುತಿಸಿದ ಪದ್ಮಿನಿ, ಪತಿಯನ್ನು ಹಿಂಬದಿಯಿಂದ ಬಳಸಿದಳು. ಇದು ನನ್ನ- ನಿಮ್ಮ ಕೊನೆಯ ರಾತ್ರಿ ಎಂದಳು. ಮಾನಕ್ಕಾಗಿ ಪ್ರಾಣ ತ್ಯಾಗ ಮಾಡುವ ಬಯಕೆ ಹೇಳಿಕೊಂಡಳು. ಭೀಮದೇವನ ಎದೆ ನಡುಗಿತು.
ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ‘ಜೀವಹರ’ (ಜೌಹರ್) ವಿಧಾನವೇ ಅಷ್ಟು ಭಯಂಕರ.
ಆದರೇನು? ಸೈತಾನನ ತೆವಲಿಗೆ ಮಡದಿಯನ್ನು ಒಪ್ಪಿಸುವುದಕ್ಕಿಂತ ಅಗ್ನಿದೇವನ ಮಡಿಲಿಗೆ ಹಾಕುವುದು ಒಳಿತೆನ್ನಿಸಿತವನಿಗೆ. ಅವಳ ತಲೆ ನೇವರಿಸಿ ಬಿಸಿಮುತ್ತನಿಟ್ಟು ಹೊರಟುಬಿಟ್ಟ. ಅದು, ಮುಂದಿನದಕ್ಕೆ ಅನುಮತಿ.
ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ಅತ್ತ ರಣಾಂಗಣದಲ್ಲಿ ಭೀಮದೇವನ ಪಡೆ ನೆಲಕಚ್ಚುತ್ತಿದ್ದ ಸುದ್ದಿ ಬಂದೊಡನೆ ರಾಣಿ ಪದ್ಮಿನಿ ಭಗವಂತನನ್ನು ನೆನೆಯುತ್ತ, ಪಾತಿವ್ರತ್ಯದ ಬಲ ರಕ್ಷಿಸಲಿ ಎನ್ನುತ್ತ ಅಗ್ನಿ ಕುಂಡಕ್ಕೆ ಹಾರಿದಳು.
ಬೆಂಕಿಯ ಕೆನ್ನಾಲಗೆ ಅವಳನ್ನು ಆವರಿಸಿತು. ಅಂತಃಪುರದ ಇತರ ಸ್ತ್ರೀಯರೂ ರಾಣಿಯನ್ನನುಸರಿಸಿದರು.
ಕರ್ಪೂರದ ಗೊಂಬೆ, ಕರಗಿಯೇ ಹೋಯ್ತು….
ಖಿಲ್ಜಿ ಧಾವಿಸಿ ಬಂದ. ಪದ್ಮಿನಿಯನ್ನು ಅಪ್ಪುವ ತವಕ ಅವನಲ್ಲಿ ತೀವ್ರವಾಗಿತ್ತು. ಆದರೆ ಅಲ್ಲಿ ನೋಡಿದ್ದೇನು? ರಾಣಿ ವಾಸ ಬಿಕೋ ಎನ್ನುತ್ತಿತ್ತು. ಎದೆ ಬಡಿತ ಹೆಚ್ಚಾಯಿತು. ಪದ್ಮಿನಿ ಸಿಗದಿದ್ದರೆ ತಾನು ಸತ್ತಂತೆಯೇ ಅಂದುಕೊಂಡ. ನಿಜ ಹೇಳಬೇಕೆಂದರೆ ಅವನು ಪ್ರತಿದಿನವೂ ಸತ್ತಿದ್ದ. ಪರ ಸ್ತ್ರೀಯನ್ನು ಬಯಸುವ ದೇಹ ಇದ್ದರೂ ಸತ್ತಂತೆಯೇ ಅಲ್ಲವೆ?
ರಜಪೂತ ಯೋಧನೊಬ್ಬ ಓಡೋಡಿ ಬಂದ. ಅಗ್ನಿ ಕುಂಡದ ಬೂದಿಯನ್ನು ಮುಷ್ಟಿಯಲ್ಲಿ ಹಿಡಿದು, ‘ಇದೋ, ರಾಣಿ ಪದ್ಮಿನಿ!’ ಎಂದ. ಆಕೆಯ ಭಸ್ಮ ಮುಟ್ಟುವ ಯೋಗ್ಯತೆಯೂ ನಿನಗಿಲ್ಲ, ಹೋಗು ಹೋಗೆಂದ.
ಖಿಲ್ಜಿ ಕಾಫಿರರನ್ನು ಹತ್ಯೆ ಮಾಡಲು ಬಂದಿದ್ದ. ಪವಿತ್ರವಲ್ಲದ ಭೂಮಿಯನ್ನು(!) ಅತಿಕ್ರಮಿಸಲು ಬಂದಿದ್ದ. ಆಕ್ರಮಿಸಿಯೂ ಇದ್ದ. ಕಾಫಿರರ ಹೆಂಡತಿಯರನ್ನು ಮಾತ್ರ ತನ್ನ ಜನಾನಾದೊಳಗೆ ಸೇರಿಸಿಕೊಳ್ಳಲಾಗದೆ ಸೋತು ಹೋಗಿದ್ದ.
ಅವನ ಈ ತಪ್ಪಿಗೆ ಖಂಡಿತ ಅವನಿಗೆ ಜನ್ನತ್ ನಲ್ಲಿ ಜಾಗ ಸಿಕ್ಕಿರಲಾರದು. ಎಪ್ಪತ್ತು ಹೆಂಗಸರ ಭೋಗವೂ ದಕ್ಕಿರಲಾರದು!
ಧನ್ಯೆ ಪದ್ಮಿನಿ! ನೀನು ಸತ್ತಾದರೂ ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸುವಲ್ಲಿ ಗೆದ್ದುಬಿಟ್ಟೆ!!
~ ಚಕ್ರವರ್ತಿ ಸೂಲಿಬೆಲೆ
ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. ಆಂತರಿಕ ಬೆಳವಣಿಗೆಯ ಪರಿಣಾಮವಾದ ‘ಭಾರತೀಯ ಸಂಸ್ಕೃತಿ’ ಇಂದಿಗೂ ಉಳಿದುಬಂದಿದ್ದರೆ, ಬಾಹ್ಯ ಬೆಳವಣಿಗೆಯ ಭವ್ಯ ಕುರುಹಾಗಿದ್ದ ‘ಸಿಂಧೂ ನಾಗರಿಕತೆ’ ನಶಿಸಿಹೋಯ್ತು.
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.
ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರ್ಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ.
ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ. ಅಥವಾ ಕೆಲವೇ ಮೇಲ್ವರ್ಗದ ಜನರ ಸೊತ್ತೂ ಅಲ್ಲ. ವೇದಗಳಲ್ಲಿ ಉಲ್ಲಿಖಿತವಾಗಿರುವಂತೆ ಇದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ. ಸಿಂಧೂ ನದಿಯ ತಟದಲ್ಲಿ ಅಭಿವೃದ್ಧಿ ಹೊಂದಿದ ಈ ಸಂಸ್ಕೃತಿಯನ್ನು ಸಹಸ್ರಮಾನಗಳ ಹಿಂದಿನಿಂದಲೂ ಒಡನಾಟದಲ್ಲಿರುವ ಪರ್ಷಿಯನ್ನರು ೧ಹಿಂದೂ’ ಎಂದು ಕರೆದರು. (ಅವರಲ್ಲಿ ‘ಸ’ಕಾರ ‘ಹ’ಕಾರವಾಗಿ ಉಚ್ಚರಿಸಲ್ಪಡುತ್ತದೆ)
ಕ್ರಮೇಣ ಹಿಂದೂ ಸಂಸ್ಕೃತಿಯವರು ಆಚರಿಸುತ್ತಿದ್ದ ಸನಾತನ ಧರ್ಮ- ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದೂಗಳಾಗಿಯೂ ಸ್ಥಾಪಿತರಾದರು. ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.
ಸನಾತನ ಧರ್ಮವನ್ನು ‘ಆಧ್ಯಾತ್ಮದ ತೊಟ್ಟಿಲು’ ಎಂದೂ, ‘ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ.
‘ಹಿಂದುತ್ವ’ವನ್ನು ಜಾತಿಯಾಗಿ ತೆಗೆದುಕೊಮ್ಡರೂ, ಧರ್ಮವಾಗಿ ತೆಗೆದುಕೊಂಡರೂ ಭಾರತದ ಬಗ್ಗೆ ಮತನಾಡುವಾಗ ಅದನ್ನು ಬಿಟ್ಟು ಮಾತನಡುವುದು ಸಾಧ್ಯವೇ ಇಲ್ಲ. ದಕ್ಷಿಣ ಏಷ್ಯಾದ ಭೂಭಾಗವೊಂದು ‘ಭರತ’ ಎಂಬ ಹೆಸರನ್ನು ಪಡೆದಿರುವುದೇ ಹಿಂದುತ್ವದ ಕಾರಣದಿಂದ. ಹಿಂದುತ್ವ- ತಮಸೋಮಾ ಜ್ಯೋತಿರ್ಗಮಯ’ ಎನ್ನುತ್ತದೆ. ಅಂದರೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಎಂದು. ಅಂತೆಯೇ, ‘ಭ’ ಧಾತುವು ಬೆಳಕನ್ನೂ, ‘ರತ’ವು ಚಲನೆಯನ್ನೂ ಸೂಚಿಸುತ್ತವೆ. ಒಟ್ಟಾರೆ, ‘ಭಾರತ’ ಪದದ ಅರ್ಥವೂ ‘ಬೆಳಕಿನೆಡೆಗೆ ಚಲಿಸೋಣ’ ಎಂದೇ.
ಹಿಂದೂ ಧರ್ಮದ ಮೂಲಭೂತ ತತ್ತ್ವ- “ಸತ್ಯವು ಏಕಮೇವಾದ್ವಿತೀಯವಾಗಿದೆ’ ಎಂಬುದು. ಮತ್ತು, ಈ ಸತ್ಯವು ಮಾನವನ ಅರಿವಿನಾಚೆ ಇದೆ. ಅದನ್ನು ಅರಿಯುವ ನಿರಂತರ ಪ್ರಯತ್ನವೇ ಬೆಳಕಿನೆಡೆಗಿನ ಚಲನೆ. ಈ ಚಲನೆಯ ಸಂದರ್ಭದಲ್ಲಿ, ಅಂತಿಮ ಗುರಿಯನ್ನು ಹೊಂದುವ ಯತ್ನದಲ್ಲಿ ಹೊರಹೊಮ್ಮಿದ್ದು- ಅತ್ಯದ್ಭುತ ಜ್ಞಾನ ಭಂಡಾರ. ವಿಜ್ಞಾನ, ಕಲೆ, ಸಂಗೀತಗಳೆಲ್ಲವೂ ಪರಮ ಸತ್ಯದ ಆರಾಧನೆಗಾಗಿಯೇ ರೂಪುಗೊಂಡಂಥವು. ಆಧುನಿಕ ವಿಜ್ಞಾನ ಜಗತ್ತಿಗೂ ಸವಾಲೆನಿಸುವ ವಾಸ್ತು ವಿನ್ಯಾಸಗಳು, ಲೋಹ- ಪಷಾಣ- ಕಾಷ್ಠ ಶಿಲ್ಪಗಳು, ಆರೋಗ್ಯ ವಿಜ್ಞಾನ, ಖಗೋಳ ಶಾಸ್ತ್ರ, ಕಾಲಮಾಪನದ ನಿಖರತೆ ಇವೆಲ್ಲದರ ಗುರಿಯೂ ಅದೇ ಆಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿ, ಭಾರತದ ನಾಗರಿಕತೆ, ಭರತೀಯ ಇತಿಹಾಸಗಳೆಂದರೆ ಅದು; ಹಿಂದೂ ಸಂಸ್ಕೃತಿ, ಹಿಂದೂ ನಾಗರಿಕತೆ, ಹಿಂದೂ ಇತಿಹಾಸವಲ್ಲದೆ ಬೇರೆಯಲ್ಲ.
~ ಹಿಂದೂ ಧರ್ಮ ~
ಛಂದೋಗ್ಯ ಉಪನಿಷತ್ತು (೨:೧) ಹೇಳುವಂತೆ, “ಬ್ರಹ್ಮವು ಅನಂತವೂ ಅಲೌಕಿಕವೂ ಪರಿಪೂರ್ಣವೂ ಆದ ಅಸ್ತಿತ್ವ. ಈ ಪೂರ್ಣದಿಂದಲೇ ಎಲ್ಲವೂ ಉದ್ಭವಿಸುತ್ತವೆ. ಎಲ್ಲವೂ ಈ ಪೂರ್ಣದಲ್ಲೇ ವಿಲೀನವಾಗುತ್ತವೆ”
ಹಿಂದೂ ಧರ್ಮವು ಪರಮ ಸತ್ಯದ ಕುರಿತು ದೃಢ ಧ್ವನಿಯಲ್ಲಿ, “ಸತ್ಯವು ಒಂದೇ ಆಗಿದೆ, ವಿದ್ವಾಂಸರು ಅದನ್ನು ವಿವಿಧ ಹೆಸರುಗಳಿಂದ ಕರೆಯುವರು” (ಏಕೋಹಮ್, ವಿಪ್ರಾ ಬಹುಧಾಃ ವದನ್ತಿ- ಋಗ್ವೇದ) ಎಂದು ಸಾರಿದೆ. ಆದರೆ, ಇವತ್ತಿನ ಹಿಂದೂ ಜಾತಿ, ಮೂಲ ಧರ್ಮದ ಉದಾತ್ತ ಧ್ಯೇಯಗಳನ್ನು ಕೈಬಿಡುತ್ತ, ಸಂಕುಚಿತವಾಗುತ್ತ ಮುನ್ನಡೆದಿದೆ. ಆದ್ದರಿಂದ, ಹಿಂದೂ ಧರ್ಮದ ಕುರಿತು ಮಾತನಾಡುವಾಗ, ಹಿಂದೂ ಜಾತಿಯ ಆಚೆ ನಿಂತು ನೋಡಬೇಕಾದುದು ಅತಿ ಮುಖ್ಯ.
ಸನಾತನ ಧರ್ಮದ ಅರಾಧ್ಯ ದೇವತೆಯೆಂದರೆ, ಅದು ಪ್ರಕೃತಿಯೇ. ಜೀವಧಾರಣೆಗೆ ಅಗತ್ಯಬಿರುವ ಪಂಚಭೂತಗಳ ಆರಾಧನೆಯೇ ಅಂಡಿನ ರೂಢಿಯಾಗಿತ್ತು. ಶಾಖ-ಬೆಳಕು ನೀಡುವ ಪೂಷನ್ (ಸೂರ್ಯ), ದೈನಂದಿನ ಕಾರ್ಯಗಳಿಗೆ ಅಗತ್ಯನಾದ ಜಾತವೇದಸ (ಅಗ್ನಿ), ಕೃಷಿಗೆ ಅನುಕೂಲನಾದ ವರುಣ, ಮಳೆಯ ಅಧಿಪತಿಯಾದ ಇಂದ್ರ, ಜೀವನಾಧಾರನಾದ ವಾಯು- ಇವರೆಲ್ಲ ವೇದಕಾಲದ ದೇವತೆಗಳು.
ಹಿಂದೂ ಧರ್ಮದ ವ್ಯಾಖ್ಯೆಯಂತೆ, ಭಗವಂತ ಎಂದರೆ ಪ್ರಕೃತಿ. ಭಗವಂತ ಎಂಡರೆ ಪುರುಷ. ಭಗವಂತ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಲಕ್ಷ್ಮಿ, ಪಾರ್ವತಿ, ಸರಸ್ವತಿ… ಯಾರು ಬೇಕಾದರೂ. ಜೀವನದ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಭಗವಂತ ರೂಪುಗೊಳ್ಳುತ್ತಾನೆ. ಅಂತೆಯೇ ರೈತನಿಗೆ ಮಣ್ಣೂ ದೇವರಾಗುತ್ತದೆ. ಸೈನಿಕನಿಗೆ ಮಾತೃಭೂಮಿ ದೇವತೆಯಾಗುತ್ತಾಳೆ. ಬೆಸ್ತನಿಗೆ ನದಿ ದೇವಿಯಾಗುತ್ತಾಳೆ. ವಿದ್ಯುಚ್ಛಕ್ತಿಯನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ, ಅಗತ್ಯಕ್ಕೆ ತಕ್ಕ ರೂಪದಲ್ಲಿ ಪಡೆಯುವುದಿಲ್ಲವೆ? ಹಾಗೆ…
ಅಗೋಚರ ಶಕ್ತಿಯಾದ ಭಗವಂತನನ್ನು ಗ್ರಹಿಕೆಯ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆಯೋ ಅಷ್ಟನ್ನು ಗ್ರಹಿಸಿ, ಆರಾಧಿಸುವುದು. ಆ ಮೂಲಕ ಭೂಮಿಯ ಮೆಲಿನ ತನ್ನ ಜೀವನ ನಿರ್ವಹಣೆಗೆ ಅಗತ್ಯ ಸಹಾಯವನ್ನು ಪಡೆಯುವುದು. ಈ ಗ್ರಹಿಕೆಯ ವ್ಯಾಪ್ತಿ ವಿಸ್ತರವಾಗುತ್ತಾ ಸಾಗಿದಂತೆ, ಭಗವತ್ ಶಕ್ತಿಯ ಅಗಾಧತೆಯ ಅರಿವಾಗುತ್ತ ಹೋದಂತೆ, ಲೌಕಿಕ ವಾಂಛೆಗಳು ಕುಗ್ಗುತ್ತ ಸಾಗಿ ಆಧ್ಯಾತ್ಮಿಕ ಉನ್ನತಿಗೆ ಆ ಶಕ್ತಿಯ ಸಹಕಾರವನ್ನು ಬಳಸಿಕೊಳ್ಳುವ ಪ್ರಬುದ್ಧತೆ ಬೆಳೆಯುತ್ತದೆ. ಬ್ರಹ್ಮ ಎಂದು ಕರೆಯಲ್ಪಡುವ ಆ ಅಗಾಧ ಶಕ್ತಿಯ ಅರಿವನ್ನು ಪಡೆಯುವಿಕೆಯು ಜ್ಞಾನೋದಯವೆಂದು ಕರೆಯಲ್ಪಡುತ್ತದೆ.
ಹಿಂದೂ ಧರ್ಮವು ‘ಧಾರ್ಮಿಕ ಮುಖಂದ’ನೆಂದು ಕರೆಯಲ್ಪೌವವನ ನಂಬಿಕೆ ಮತ್ತು ಅನುಭವಗಳಿಗಿಂತ ಹೆಚ್ಚಾಗಿ ಆತನ ನಡವಳಿಕೆಯ ಮೇಲೆ ತನ್ನ ನಂಬಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ. ಹಿಂದುತ್ವದ ಮೇಲಿರುವ ‘ಪುರೋಹಿತಷಾಹಿ’ ಅಪವಾದ, ವಾಮಪಂಥೀಯರು ಹೊರಿಸಿದ ಮಿಥ್ಯಾರೋಪವಷ್ಟೆ. ಇಲ್ಲವಾದಲ್ಲಿ ಭಾರತದ ಅನೇಕಾನೇಕ ಅಧ್ಯಾತ್ಮಿಕ ಪಂಥಗಳ ಮುಖಂಡರು, ಸಂತರು, ಅಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. “ನಾನು ನಿಮ್ಮ ಮುಂದಾಳು, ನನ್ನನ್ನು ಅನುಸರಿಸಿ” ಎಂದು ಆದೇಶ ಮಾಡುವವನ ಅರ್ಹತೆಯನ್ನು ಜನರೇ ನಿರ್ಧರಿಸುತ್ತಿದ್ದರು. ಇಲ್ಲಿ ಮೌಢ್ಯಕ್ಕೆ, ಅಂಧ ಶ್ರದ್ಧೆಗೆ ಅವಕಾಶವಿರಲಿಲ್ಲ. (ಕಲುಷಿತ ಹಿಂದೂ ಜಾತಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಇಲ್ಲಿ ಢೋಂಗಿ ಗುರು ಶಿಷ್ಯರಿದ್ದಾರೆ, ಮೂಢ ಭಕ್ತರೂ ಇದ್ದಾರೆ)
ಭಾರತ ಕಂಡ ಅಪ್ರತಿಮ ತತ್ತ್ವಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ, “ ಪ್ರವಾದಿಯೊಬ್ಬನನ್ನೇ ಆಧಾರವಾಗಿಟ್ಟುಕೊಂಡ ಧರ್ಮವು ಸಂಕುಚಿತ , ತೀವ್ರಗಾಮಿ, ಅಸಹಿಷ್ಣು ಮತ್ತು ಸ್ನೇಹಭಾವದ ಕೊರತೆಯಿಂದ ಕೂಡಿರುತ್ತದೆ. ಸನಾತನ ಧರ್ಮವು ಪರಿತ್ಯಾಗ ಮತ್ತು ಶಾಂತಿ- ಸೌಹರ್ದತೆಗಳಿಂದ ಕೂಡಿರುತ್ತವೆ”. ಅವರು ಪ್ರಶ್ನಿಸುತ್ತಾರೆ, “ ಯಾವುದೆ ಅಧಿಕೃತ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶವಿಲ್ಲದ ರೋಮನ್ ಕ್ಯಾಥೊಲಿಕ್ ಸಮಾಜಗಳಲ್ಲಿ ಹಿಟ್ಲರ್, ಮುಸೊಲಿನಿಯಂಥವರು ಜನಿಸಿದ್ದು ಒಂದು ಆಕಸ್ಮಿಕವೇ?” ಎಂದು.
ಹಿಂದೂ ಧರ್ಮದ ಅತ್ಯಂತ ಪ್ರಮುಖ ಧನಾತ್ಮಕ ಅಂಶ- ಅದರ ವೈಶಾಲ್ಯತೆ. ಅದು, ತನಗೆ ಸೇರದ ಇತರರನ್ನು ದ್ರೋಹಿಗಳೆಂದು ಬಗೆಯುವುದಿಲ್ಲ. ಕ್ರೌರ್ಯದಿಂಡ, ಬಲವಂತದಿಂದ ಇತರ ಮತಗಳ ಜನರನ್ನು ತನ್ನ ವ್ಯಾಪ್ತಿಗೆ ಕರೆತಂದು, ವೈವಿಧ್ಯತೆಯನ್ನು ನಾಶ ಮಾಡಿ, ಯಾಂತ್ರೀಕೃತ ತನ್ನನ್ನು ಅನುಸರಿಸುವ ಬಣವನ್ನು ಸೃಷ್ಟಿಸುವುದು ಅದಕ್ಕೆ ಬೇಕಿಲ್ಲ. ಇತಿಹಾಸದ ಯಾವ ಹಂತದಲ್ಲಿಯೂ ಹಿಂದೂಗಳು ಬಲಾತ್ಕಾರದ ಮತಾಂತರ ನಡೆಸಿದ್ದನ್ನು ನೀವು ನೋಡಲಾರಿರಿ.
ಇವತ್ತಿನ ಹಿಂದೂಗಳೂ ತಮ್ಮನ್ನು ತಾವು ಹಾಗೆಂದು ಕರೆದುಕೊಳ್ಳುವ ಮುನ್ನ ತಾವು ತಮ್ಮ ಧರ್ಮದ ಮೌಲ್ಯಗಳನ್ನು ಒಳಗೊಂಡಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಹೃದಯ ವೈಶಾಲ್ಯತೆ ಇರದ ಯಾವೊಬ್ಬನಿಗೂ ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ಅರ್ಹತೆ ಇರುವುದಿಲ್ಲ.
ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. ಆಂತರಿಕ ಬೆಳವಣಿಗೆಯ ಪರಿಣಾಮವಾದ ‘ಭಾರತೀಯ ಸಂಸ್ಕೃತಿ’ ಇಂದಿಗೂ ಉಳಿದುಬಂದಿದ್ದರೆ, ಬಾಹ್ಯ ಬೆಳವಣಿಗೆಯ ಭವ್ಯ ಕುರುಹಾಗಿದ್ದ ‘ಸಿಂಧೂ ನಾಗರಿಕತೆ’ ನಶಿಸಿಹೋಯ್ತು.
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.
ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರ್ಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ.
ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ. ಅಥವಾ ಕೆಲವೇ ಮೇಲ್ವರ್ಗದ ಜನರ ಸೊತ್ತೂ ಅಲ್ಲ. ವೇದಗಳಲ್ಲಿ ಉಲ್ಲಿಖಿತವಾಗಿರುವಂತೆ ಇದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ. ಸಿಂಧೂ ನದಿಯ ತಟದಲ್ಲಿ ಅಭಿವೃದ್ಧಿ ಹೊಂದಿದ ಈ ಸಂಸ್ಕೃತಿಯನ್ನು ಸಹಸ್ರಮಾನಗಳ ಹಿಂದಿನಿಂದಲೂ ಒಡನಾಟದಲ್ಲಿರುವ ಪರ್ಷಿಯನ್ನರು ೧ಹಿಂದೂ’ ಎಂದು ಕರೆದರು. (ಅವರಲ್ಲಿ ‘ಸ’ಕಾರ ‘ಹ’ಕಾರವಾಗಿ ಉಚ್ಚರಿಸಲ್ಪಡುತ್ತದೆ)
ಕ್ರಮೇಣ ಹಿಂದೂ ಸಂಸ್ಕೃತಿಯವರು ಆಚರಿಸುತ್ತಿದ್ದ ಸನಾತನ ಧರ್ಮ- ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದೂಗಳಾಗಿಯೂ ಸ್ಥಾಪಿತರಾದರು. ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.
ಸನಾತನ ಧರ್ಮವನ್ನು ‘ಆಧ್ಯಾತ್ಮದ ತೊಟ್ಟಿಲು’ ಎಂದೂ, ‘ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ.
ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಖೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?
ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!
ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.
ಅದೇಕೋ ಸದ್ಗುರುಗಳಾಗುವ ಹಂಬಲ ಇಂದಿನ ಪೀಳಿಗೆಯಲ್ಲಿ ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು ಅಪ್ಪ-ಅಮ್ಮ ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!
ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !
ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ! ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.
ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.
ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ ಅದಕ್ಕೇ.
ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.
ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರು. ಭಾರತ ತೊಂದರೆಯಲ್ಲಿ ಸಿಲುಕಿಕೊಂಡಾಗಲೆಲ್ಲ ಆಚಾರ್ಯರು – ಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
© All Rights Reserved. ಚಕ್ರವರ್ತಿ ಸೂಲಿಬೆಲೆ